ಯಕ್ಷ ಸಾಧಕರು ೯

ಯಕ್ಷಪಟು ಸುಷ್ಮಾ ಮೈರ್ಪಾಡಿ.

ತೆಂಕುತಿಟ್ಟು ಯಕ್ಷಗಾನ ಅನೇಕ ಯುವ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಅನೇಕ ಮಹಿಳಾ ಕಲಾವಿದರು ಯಕ್ಷಗಾನ ರಂಗದಲ್ಲಿ ನಮಗೆ ಕಾಣಲು ಸಿಗುತ್ತಾರೆ. ಅಂತಹ ಕಲಾವಿದರ ಸಾಲಿನಲ್ಲಿ ನಮಗೆ ನೋಡ ಸಿಗುವ ಕಲಾವಿದೆ ಸುಷ್ಮಾ ಮೈರ್ಪಾಡಿ.

ದಿನಾಂಕ 15.07.1993ರಂದು ಶಂಕರನಾರಾಯಣ ಮೈರ್ಪಾಡಿ ಹಾಗೂ ಶೈಲಜಾ ಇವರ ಮಗಳಾಗಿ ಜನನ. ಸೌಜನ್ಯ ಶ್ರೀಕುಮಾರ್ ಇವರ ಅಕ್ಕನ ಹೆಸರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಎನ್.ಎಮ್.ಪಿ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತು, ಸುರತ್ಕಲ್ ಗೋವಿಂದದಾಸ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮುಗಿಸಿ, ಶ್ರೀನಿವಾಸ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಆಗಿ ಪ್ರಸ್ತುತ ಬೆಂಗಳೂರಿನಲ್ಲಿ ಎನ್.ಟಿ.ಟಿ. ಡೇಟಾ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿ.
ತಂದೆ ಶಂಕರನಾರಾಯಣ ಮೈರ್ಪಾಡಿ ಇವರ ಯಕ್ಷಗಾನದ ಗುರು. ಯಕ್ಷರಂಗಕ್ಕೆ ಬರಲು ಕೂಡ ಇವರ ತಂದೆಯೇ ಪ್ರೇರಣೆ ಎಂದು ಹೇಳುತ್ತಾರೆ ಇವರು. ತಮ್ಮ 4ನೇ ವಯಸ್ಸಿನಲ್ಲಿ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ಕಿರಾತ ಪಡೆ ವೇಷ ಮಾಡಲು ಹೇಳಿದಾಗ ನಾನು ನಿರಾಕರಿಸಿ ಮರುದಿನ ನಾನು ವೇಷ ಮಾಡುತ್ತೆನೆ ಎಂದು ಹಟ ಹಿಡಿದು ಪಾತ್ರವನ್ನು ಒಪ್ಪಿಕೊಂಡ ವಿಷಯವನ್ನು ನನ್ನ ತಂದೆ ಹಾಗೂ ತಾಯಿ ಸದಾ ನನ್ನ ಬಳಿ ಹೇಳಿದ ನೆನಪು. ಹಾಗೂ ಹೆಜ್ಜೆಗಾರಿಕೆ ಕಲಿತು ಮಾಡಿದ ಪ್ರಥಮ ಪಾತ್ರ ದೇವೇಂದ್ರ ಬಲ. ಅಲ್ಲಿಂದ ನನ್ನ ಯಕ್ಷಗಾನದ ಪಯಣ ಪ್ರಾರಂಭ ಎನ್ನುತ್ತಾರೆ ಸುಷ್ಮಾ ಮೈರ್ಪಾಡಿ.

ಯಕ್ಷಗಾನದಲ್ಲಿ ಅನೇಕ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಕಿರಾತ, ಅಗ್ನಿ, ಸುದರ್ಶನ, ಅಭಿಮನ್ಯು, ಕೃಷ್ಣ, ವಿಷ್ಣು, ಜಾಂಬವ, ಗರುಡ, ಮೋಹಿನಿ, ಮಾಲಿನಿ, ದೇವೇಂದ್ರ, ಶಿಶುಪಾಲ, ಕಂಸ, ವೀರಭದ್ರ, ದೇವಿ, ರಕ್ತಬೀಜ, ಮಹಿಷಾಸುರ ಹೀಗೆ ಇನ್ನು ಹಲವು ವೇಷಗಳನ್ನು ಮಾಡಿರುವ ಇವರು; ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಹೀಗೆ 4 ಭಾಷೆಯಲ್ಲಿ ಪಣಂಬೂರು ಮಕ್ಕಳ ಮೇಳ ಯಕ್ಷಗಾನ ಕಲಾ ಮಂಡಳಿ, ಹಿಂದಿ ಯಕ್ಷಗಾನ ಮಂಡಳಿ ಪಣಂಬೂರು, ಯಕ್ಷ ನಂದನ ಇಂಗ್ಲಿಷ್ ಯಕ್ಷಗಾನ ಮಂಡಳಿ ಕುಳಾಯಿ, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಬಾಳ ಕಾಟಿಪಳ್ಳ, ಯಕ್ಷಾರಾಧನ ಕಲಾ ಕೇಂದ್ರ ಉರ್ವ ಮಂಗಳೂರು ಹೀಗೆ ಹಲವಾರು ಸಂಸ್ಥೆಯಲ್ಲಿ ಅಭಿನಯಸಿದ ಅನುಭವ ಇವರಿಗಿದೆ.

ಯಕ್ಷಗಾನ ಬಿಟ್ಟು ನಾಟಕ, ನಾಟ್ಯ, ಕ್ರೀಡೆ, ಸಂಗೀತ, ರಂಗೋಲಿ, ಭಾಷಣ ಇವರ ಹವ್ಯಾಸಗಳು. 2013ರಲ್ಲಿ ತುಳು ಅಕಾಡಮಿ ನಡೆಸಿದ ಯಕ್ಷಗಾನ ಸ್ಪರ್ಧೆಯಲ್ಲಿ ದಾಕ್ಷಾಯಿಣಿ ಪಾತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿದೆ. ಮಂಗಳೂರಿನಲ್ಲಿ ನಡೆದ ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ಇವರ ತಂಡ ಉತ್ತಮ ತಂಡವಾಗಿ ಮೂಡಿ ಬಂದಿದೆ. 2016-17ರಲ್ಲಿ ನವದೆಹಲಿ ಕರ್ನಾಟಕ ಸಂಘ ಏರ್ಪಡಿಸಿದ ಯಕ್ಷಗಾನದಲ್ಲಿ ಪ್ರದರ್ಶನ ನೀಡಿದ್ದಾರೆ. ಯಕ್ಷಗಾನದಲ್ಲಿ ಇವರಿಗೆ ಸುದರ್ಶನ, ಮಹಿಷಾಸುರ, ಪ್ರಭಾವತಿ, ಅಂಬೆ ಇವರ ನೆಚ್ಚಿನ ವೇಷಗಳು.

ಬೆಹ್ರೈನ್ (UAE), ದೆಹಲಿ, ಬೆಂಗಳೂರು, ಮಂಗಳೂರು, ಕೋಲ್ಕತ್ತಾ, ಗುಜರಾತ್, ಕಳಸ ಹೀಗೆ ರಾಷ್ಟ್ರ ಹಾಗೂ ವಿದೇಶದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

“ಕಲಾಶ್ರೀ ಚೂಡಾಮಣಿ" ಹಾಗೂ “ಸುಮ ಸೌರಭ" ಎಂಬ ಎರಡು ಪ್ರಶಸ್ತಿಗಳು ಇವರಿಗೆ ಸಿಕ್ಕಿದೆ. ಇಷ್ಟು ಅಲ್ಲದೆ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಮಹಾಗಣಪತಿ ದೇವಸ್ಥಾನ ಕಾಟಿಪಳ್ಳ, ಶ್ರೀ ಮಾತಾ ಮಹಿಳಾ ಮಂಡಳಿ ಕೃಷ್ಣಾಪುರ ಸುರತ್ಕಲ್ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಇವರಿಗೆ ಪ್ರತಿಭಾ ಪುರಸ್ಕಾರ ಸಿಕ್ಕಿದೆ.
ಯಕ್ಷಗಾನ ರಂಗದಲ್ಲಿ ಇನ್ನು ಅನೇಕ ಸಾಧನೆ ಮಾಡಬೇಕು ಹಾಗೂ ಯಕ್ಷಗಾನ ತರಗತಿಗಳನ್ನು ಮಾಡಬೇಕು ಹಾಗೂ ಯಕ್ಷಗಾನ ರಂಗಕ್ಕೆ ಇನ್ನು ಅನೇಕ ಯುವ ಕಲಾವಿದರನ್ನು ಕೊಡುಗೆಯಾಗಿ ಕೊಡಬೇಕು ಎಂಬ ಒಂದು ದೊಡ್ಡ ಕನಸು ಇದೆ ಎಂದು ಇವರು ಹೇಳುತ್ತಾರೆ.

ದಿನಾಂಕ 12.11.2017ರಲ್ಲಿ ಸುಧನ್ವ ವಸಿಷ್ಠ  ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. 

ಇವರಿಗೆ ಇವರು ನಂಬಿರುವ ಕಲಾಮಾತೆ  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395