ಯಕ್ಷ ಸಾಧಕರು ೮೭
ಯಕ್ಷ ಗಾರುಡಿ, ಸವ್ಯಸಾಚಿ ಶ್ರೀಯುತ ಸುಬ್ರಾಯ ಹೆಬ್ಬಾರ್ ಬಿ.
ಮನೋರಂಜನೆಯ ಮೂಲಕ ಮನೋವಿಕಾಸಕ್ಕೆ ಕಾರಣವಾಗುವ ಒಂದು ಸಂಪೂರ್ಣ ಕಲೆ ನಮ್ಮ ಯಕ್ಷಗಾನ. ಇಂತಹ ಗಂಡು ಕಲೆಯಲ್ಲಿ ನಮಗೆ ಅನೇಕ ಕಲಾವಿದರು ಕಾಣಲು ಸಿಗುತ್ತಾರೆ ಇಂತಹ ಗಂಡು ಕಲೆಯಲ್ಲಿ ಮಿಂಚುತ್ತಿರುವ ಭಾಗವತರು ಶ್ರೀಯುತ ಸುಬ್ರಾಯ ಹೆಬ್ಬಾರ್ ಬಿ.
ಶ್ರೀಮತಿ ಗಿರಿಜಾ ಹೆಬ್ಬಾರ್ ಬಿ ಹಾಗೂ ಶ್ರೀಯುತ ವೆಂಕಪ್ಪಯ್ಯ ಹೆಬ್ಬಾರ್ ಬಿ ಇವರ ಮಗನಾಗಿ ದಿ ೦೯.೦೬.೧೯೮೫ ರಂದು ಜನನ. ೧೦ನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆ ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ವೇಷಧಾರಿ ಹಾಗೂ ಇವರ ತಾಯಿಯ ತಂದೆ ಯಕ್ಷಗಾನ ಕಲಾವಿದರಾದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಹಾಗೂ ಯಕ್ಷಗಾನ ಅಂದ್ರೆ ಏನೋ ನನ್ನುಸಿರು ಎಂದು ಹೆಬ್ಬಾರ್ ಅವರು ಹೇಳುತ್ತಾರೆ .
ಯಕ್ಷಗಾನ ರಂಗದಲ್ಲಿ ಒಟ್ಟು ೨೫ ವರ್ಷಗಳ ಅನುಭವ ಇವರದು. ಹೆರಂಜಾಲು ವೆಂಕಟರಮಣ ಗಾಣಿಗ, ಹೆರಂಜಾಲು ಸುಬ್ಬಣ್ಣ ಗಾಣಿಗ, ನಾರಾಯಣ ಮಯ್ಯ ಇವರ ಯಕ್ಷಗಾನ ನಾಟ್ಯ ಗುರುಗಳು ಹಾಗೂ ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಹೆರಂಜಾಲು ಗೋಪಾಲ ಗಾಣಿಗ ಇವರ ಭಾಗವತಿಗೆ ಗುರುಗಳು. ೨೦ ವರ್ಷಗಳಿಂದ ವೇಷಗಾರಿಕೆ ಹಾಗೂ ೧೦ ವರ್ಷಗಳಿಂದ ಯಕ್ಷಗಾನ ಭಾಗವತಿಗೆಯನ್ನು ಮಾಡುತ್ತಿದ್ದಾರೆ. ಮೊದಲು ಸ್ತ್ರೀ ವೇಷಧಾರಿ ಮತ್ತು ಪುಂಡು ವೇಷಧಾರಿ ಆಗಿದ್ದ ಇವರು ಆಮೇಲೆ ಭಾಗವತ ಆದದ್ದು ಎಂದು ಹೇಳುತ್ತಾರೆ.
ಮಾರುತಿ ಪ್ರತಾಪ, ಪಂಚವಟಿ, ಕರ್ಣಾರ್ಜುನ ಕಾಳಗ, ಭೀಷ್ಮವಿಜಯ, ಆದರ್ಶಪುತ್ರ ಭೀಷ್ಮ, ಬೇಡರ ಕಣ್ಣಪ್ಪ, ಜಾಂಬವತಿ ಕಲ್ಯಾಣ, ಶ್ರೀ ಕೃಷ್ಣಗಾರುಡಿ, ಮೀನಾಕ್ಷಿ ಕಲ್ಯಾಣ, ವೀರಮಣಿ ಕಾಳಗ, ಕುಶಲವರ ಕಾಳಗ, ದಕ್ಷ ಯಜ್ಞ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಮಧ್ಯಮಾವತಿ, ಹಿಂದೊಳ, ಮೋಹನ, ತೋಡಿ, ಭುಪಾಲಿ ಇತ್ಯಾದಿ ಇವರ ನೆಚ್ಚಿನ ರಾಗಗಳು.
ಕಾಳಿಂಗ ನಾವುಡ, ಹೆರಂಜಾಲು ಗೋಪಾಲ ಗಾಣಿಗ, ನಗರ ಸುಬ್ಬಣ್ಣ, ರಾಘವೇಂದ್ರ ಮಯ್ಯ ಹಾಲಾಡಿ ಇವರ ನೆಚ್ಚಿನ ಭಾಗವತರು.
ರಾಮಣ್ಣ ಮಂದಾರ್ತಿ,ರಾಕೇಶಣ್ಣ, ಶ್ರೀನಿವಾಸ ಪ್ರಭು (ಗುಂಡ) ಇವರ ನೆಚ್ಚಿನ ಚೆಂಡೆ ವಾದಕರು ಹಾಗೂ ಶಂಕರ ಭಾಗವತರು ಹಾಗೂ ಸುನಿಲ್ ಭಂಡಾರಿ ಇವರ ನೆಚ್ಚಿನ ಮದ್ದಳೆ ವಾದಕರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದ ಸ್ಥಿತಿ ಗತಿಯ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಆದರೆ ಒಂದನ್ನು ಹೇಳಬಲ್ಲೆ. ಪ್ರಾಮಾಣಿಕತನಕ್ಕೆ ಬೆಲೆ ಇಲ್ಲ. ಹಾಗೂ ಪ್ರೇಕ್ಷಕರೆಲ್ಲ ನಮ್ಮಂತಹ ಕಲಾವಿದರಿಗೆ ಆಸರೆಯಾಗಲಿ. ಯಕ್ಷಗಾನವೇ ನನ್ನ ಉಸಿರಾಗಬೇಕು, ನನ್ನ ಕೊನೆಯೇ ಯಕ್ಷಗಾನದಲ್ಲಾಗಬೇಕು ಎಂದು ಹೆಬ್ಬಾರ್ ಅವರು ಹೇಳುತ್ತಾರೆ.
ವೇಷ ಅಂದ್ರೆ ನನಗೆ ಜೀವ. ಅಡುಗೆ ಮಾಡುವುದು ಹಾಗೂ ಯಕ್ಷಗಾನ ಹೇಳಿಕೊಡುವುದು ಇವರ ಹವ್ಯಾಸ. ಯಕ್ಷಗಾನ ರಂಗದಲ್ಲಿ ಅನೇಕ ಸನ್ಮಾನಗಳು ಆಗಿದೆ ಅದರಲ್ಲಿ ಯಕ್ಷ ದಕ್ಷ ಗುರು, ಯಕ್ಷ ಗಾರುಡಿ, ಸವ್ಯಸಾಚಿ ಇತ್ಯಾದಿ ಬಿರುದು ಇವರಿಗೆ ಸಿಕ್ಕಿರುತ್ತದೆ.
೦೪.೦೬.೨೦೧೭ ರಂದು ಸಿಂಧುಶ್ರೀ N S ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- P.K jain, Dheeraj udupa upinakudru.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment