ಯಕ್ಷ ಸಾಧಕರು ೧೦೧
ಅಭಿನಯ ಶಾರದೆ ಡಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ
ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನ ಕಲೆ ಬೆರೆತಿದೆ. ಕಿರಿಯ ವಯಸ್ಸಿನಿಂದಲೇ ಯಕ್ಷಗಾನ ಕಲೆ ಕರಗತ ಮಾಡಿಕೊಂಡು, ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವ ಯಕ್ಷಗಾನ ಕಲಾವಿದ ಡಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ.
ಡಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ೨೭.0೨.೧೯೮೫ ರಂದು ಆನಂದ ಶೆಟ್ಟಿ ಹಾಗೂ ಯಮುನಾ ಶೆಟ್ಟಿ ಇವರ ೬ ಜನ ಮಕ್ಕಳಲ್ಲಿ ನಾಲ್ಕನೇಯವರಾಗಿ ಜನನ. ಮೂವರು ಅಕ್ಕಂದಿರು ಹಾಗೂ ಓರ್ವ ತಂಗಿ. ದಿವಾಣ ಶಿವಶಂಕರ ಭಟ್ ಇವರ ಯಕ್ಷಗಾನ ಗುರುಗಳು. ದೊಡ್ಡಕ್ಕನ ಗಂಡ ಮಹಾಬಲ ಶೆಟ್ಟಿ ಇವರಿಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
ರಂಗಸ್ಥಳಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರಸಂಗ ಗೊತ್ತಾದರೆ ಮುಂಚಿನ ದಿನವೇ ತಯಾರಿ ಮಾಡುತ್ತೇನೆ. ಹಿರಿಯ ಕಲಾವಿದರಿಂದ ಕೇಳಿ, ಯೂಟ್ಯೂಬ್ ವೀಡಿಯೋ ವೀಕ್ಷಿಸಿ, ಶಶಿಕಾಂತ ಶೆಟ್ಟಿ ಕಾರ್ಕಳ, ಅಮ್ಮುಂಜೆ ಮೋಹನ್, ಉಜಿರೆ ನಾರಾಯಣ, ಪೆರುವಾಯಿ ನಾರಾಯಣ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ,ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಪುಂಡಿಕೈ ಗೋಪಾಲಕೃಷ್ಣ ಭಟ್, ವಾದಿರಾಜ ಕಲ್ಲೂರಾಯ, ಕೋಳ್ಯೂರು ರಾಮಚಂದ್ರ ರಾಯರ ವೀಡಿಯೋ ವೀಕ್ಷಿಸಿ ತಯಾರಿ ಮಾಡುತ್ತೇನೆ.
ಮಾನಿಷಾದ, ದೇವಿ ಮಹಾತ್ಮೆ ಶೂರ್ಪನಖಾ ಮಾನಭಂಗ, ಶ್ರೀನಿವಾಸ ಕಲ್ಯಾಣ, ದಕ್ಷಯಜ್ಞ, ನಳ ದಮಯಂತಿ, ಸತ್ಯ ಹರಿಶ್ಚಂದ್ರ, ವಿಶ್ವಾಮಿತ್ರ ಮೇನಕೆ, ಕಟೀಲು ಕ್ಷೇತ್ರ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು.
ಶ್ರೀ ದೇವಿ, ಮಾನಿಷಾದ ಪ್ರಸಂಗದ ಸೀತೆ, ದಾಕ್ಷಾಯಿಣಿ, ಮೇನಕೆ, ಶ್ರೀನಿವಾಸ, ದಮಯಂತಿ, ಚಂದ್ರಮತಿ, ಕಯಾದು, ಪದ್ಮಾವತಿ, ಶಶಿಪ್ರಭೆ, ಶಿವಪ್ರಭೆ ಇವರ ನೆಚ್ಚಿನ ವೇಷಗಳು.
ಯಕ್ಷಗಾನ ಇಂದಿನ ಸ್ಥಿತಿಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ಪರಂಪರೆ ಬೇಕು. ಆದರೆ ಪೂರ್ಣ ಪ್ರಮಾಣದ ಪರಂಪರೆಯ ಯಕ್ಷಗಾನ ಮಾಡುವುದು ಕಷ್ಟ. ಆದರೆ ಪರಂಪರೆ ಬೇಕು, ಪೂರ್ಣ ಪ್ರಮಾಣದಲ್ಲಿ ಪರಂಪರೆಯನ್ನು ಉಳಿಸಿಕೊಂಡು ಹೋದರೆ ಈಗಿನ ಯುವಪೀಳಿಗೆ ಯಕ್ಷಗಾನದಲ್ಲಿ ಹೊಸತನವನ್ನು ಬಯಸುತ್ತಾರೆ.
ಹಾಗಂತ ಯಕ್ಷಗಾನ ರಂಗದ ಚೌಕಟ್ಟಿಗೆ ಚ್ಯುತಿ ಬಾರದಂತೆ, ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಚ್ಯುತಿ ಬಾರದಂತೆ ಯಕ್ಷಗಾನ ಮುಂದುವರಿಸಿಕೊಂಡು ಹೋಗಬೇಕೆಂಬುದೆ ಆಸೆ.
ಶಬರೀಶ ಯಕ್ಷಗಾನ ಕಲಾಕೇಂದ್ರ ನೆಲ್ಯಾಡಿ ಮತ್ತು ಶ್ರೀ ದೇವಿ ಲಲಿತಕಲಾ ಕೇಂದ್ರ ಕಡಬದಲ್ಲಿ ನನ್ನ ಗುರುಗಳು ಹೇಳಿಕೊಟ್ಟ ಎಲ್ಲಾ ಹೆಜ್ಜೆಗಳನ್ನು ಮಕ್ಕಳಿಗೆ ಹೇಳಿಕೊಡುತ್ತೇನೆ. ಒಂದೇ ವರ್ಷದಲ್ಲಿ ವೇಷ ಮಾಡುತ್ತೇನೆ ಎಂದರೆ ಕಷ್ಟ. ಸಕಲವನ್ನು ಕಲಿತು ರಂಗಕ್ಕೆ ಏರಬೇಕು ಎಂಬುದು ನನ್ನ ಬಯಕೆ, ಹಾಗಂತ ರಂಗಪ್ರವೇಶ ಆಗಿರುತ್ತದೆ. ಮಕ್ಕಳಿಗೆ ಹೇಳಿಕೊಡುವಾಗ ತಾಳ್ಮೆ ಇರಬೇಕು. ಮಕ್ಕಳ ಮನೆಯ ಸ್ಥಿತಿಗತಿ ಅರ್ಥ ಮಾಡಿಕೊಂಡು ಪಾಠ ಮಾಡಬೇಕಾಗುತ್ತದೆ. ಮಕ್ಕಳಿಗೆ ಹೇಳಿ ಕೊಡುವಾಗ ನಮ್ಮ ಹೆಜ್ಜೆಗಳು ಗಟ್ಟಿಯಾಗಿ ಇರುತ್ತದೆ.
ಕೋವಿಡ್ ಯಿಂದಾಗಿ ದೊಡ್ಡ ಸಮಸ್ಯೆ. ಕಲಾವಿದರ ಜೀವನ ಎಂಬುದೇ ದೊಡ್ಡ ಕಷ್ಟ. ಮನೆಯ ಸಮಸ್ಯೆ, ಸ್ಥಿತಿಗತಿ, ತುಂಬಾ ಕಷ್ಟ ಆಗಿದ್ದರೂ,ಕಲಾವಿದರು ಎದುರಿನಿಂದ ನಗುತ್ತಾ ಇರುತ್ತಾರೆ. ಲಾಕ್ಡೌನ್ ಯಿಂದಾಗಿ ಕಲಾವಿದರಿಗೆ ಉದ್ಯೋಗ ಇಲ್ಲದೆ,ಯಕ್ಷಗಾನವನ್ನೆ ನಂಬಿದವರಿಗೆ ಕಷ್ಟವಾಗಿದೆ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಕಲೆಗಳಲ್ಲಿ ಯಕ್ಷಗಾನವು ಒಂದು ದೊಡ್ಡ ಕಲೆ. ಇದನ್ನು ಉಳಿಸಿ ಬೆಳೆಸುವುದು ನನ್ನ. ದೊಡ್ಡ ಉದ್ದೇಶ. ಆದುದರಿಂದ ಮಕ್ಕಳಿಗೆ ಹೇಳಿ ಕೊಡುತ್ತಾ ಇದ್ದೇನೆ. ಯಕ್ಷಗಾನ ನನಗೆ ಪಂಚಪ್ರಾಣ.ನನ್ನ ಜೀವನದಲ್ಲಿ ಯಕ್ಷಗಾನದಿಂದಾಗಿ ತುಂಬಾ ಒಳ್ಳೆಯದಾಗಿದೆ.
೨೦೦೦-೨೦೦೧ ಧರ್ಮಸ್ಥಳ ಲಲಿತಕಲ ಕೇಂದ್ರದಲ್ಲಿ ನಾಟ್ಯಾಭ್ಯಾಸ ಮಾಡಿದ್ದು ತದನಂತರ 2001 ಧರ್ಮಸ್ಥಳ ಮೇಳಕ್ಕೆ ಪಾದಾರ್ಪಣೆ ಆಮೇಲೆ ಕಟೀಲು ಮೇಳಕ್ಕೆ ಪಾದಾರ್ಪಣೆ. ಕಟೀಲಿನಲ್ಲಿ ೪ನೇ ಮೇಳ,೧ನೇ ಮೇಳ,೫ನೇ ಮೇಳ, ಪ್ರಸ್ತುತ ೬ನೇ ಮೇಳ ದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
೮ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ "ಯಕ್ಷಕಿರಣ ಪ್ರಶಸ್ತಿ", ಕುಂದಾಪುರ ದಲ್ಲಿ "ಅಭಿನಯ ಶಾರದೆ" ಎಂಬ ಬಿರುದು ಸಿಕ್ಕಿದೆ. ಮುಂಬೈ ಬಂಟರ ಸಂಘದಲ್ಲಿ ಸನ್ಮಾನ, ಪದ್ಮನಾಭ ಕಟೀಲು ಇವರು ಮುಂಬೈಯಲ್ಲಿ ನಡೆಸುವ ಯಕ್ಷಗಾನದಲ್ಲಿ "ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ", ಕಟೀಲು ಮೇಳದಲ್ಲಿ, ದುಬೈಯಲ್ಲಿ, ಊರಿನಲ್ಲಿ ಸನ್ಮಾನ.
ಛದ್ಮವೇಷ, ನಾಟಕದಲ್ಲಿ ಅಭಿನಯಿಸುವುದು, ಪತ್ಯನಾಜೆ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೃಷಿ ಮಾಡುವುದು ಹವ್ಯಾಸಗಳು.
ಅಮೆರಿಕ, ಲಂಡನ್, ಹಿಮಾಚಲ ಪ್ರದೇಶ, ದಿಲ್ಲಿ, ಕುವೈಟ್, ಮಸ್ಕತ್, ನೇಪಾಳ, ಬಂಗಾಳ ಕೊಲ್ಲಿ, ಮಧ್ಯ ಪ್ರದೇಶ, ಜಮ್ಮು ಕಾಶ್ಮೀರ, ಹಿಂದಿ, ಕನ್ನಡ, ತುಳು 3 ಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದೇನೆ.
೫ ನೇ ಮೇಳಕ್ಕೆ ಬಂದಾಗ ಪ್ರಧಾನ ಸ್ತ್ರೀ ವೇಷ ಸಿಕ್ಕಿತು.
ತಾಯಿ ದುರ್ಗಾ ಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ, ಮೇಳದ ಯಜಮಾನರಾದ ದೇವಿ ಪ್ರಸಾದ ಶೆಟ್ಟಿ ಕಲ್ಲಾಡಿಯವರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ. ಪ್ರೇಕ್ಷಕರ ಪ್ರೀತಿ ಸದಾ ನನ್ನ ಮೇಲಿರಲಿ ಎಂಬುದು ಇವರ ಪ್ರಾರ್ಥನೆ.
ಕಲಾವಿದ ದೊಡ್ಡವನಾಗಿ ಬೆಳೆಯಬೇಕಾದರೆ ಅಭಿಮಾನಿಗಳು ಬೇಕು. ನಾವು ತಪ್ಪು ಮಾಡಿದಾಗ ತಿದ್ದುವ ಅಭಿಮಾನಿಗಳು ಎಲ್ಲ ಕಲಾವಿದರಿಗೂ ಸಿಗಬೇಕು. ಬೇಸರದ ವಿಷಯ ಅಂತ ಹೇಳಿದ್ರೆ ತಾಯಿಯನ್ನ ಕಳೆದು ಕೊಂಡದ್ದು ಬೇಸರದ ವಿಷಯ.
೧೨.೧೧.೨೦೨೧ ರಂದು ಕೃತಿ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Dhanu.K.P, Vaishak Kotian.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment