ಯಕ್ಷ ಸಾಧಕರು ೨
ಯಕ್ಷಪ್ರಿಯೆ ಅರ್ಷಿಯಾ
ಕರಾವಳಿಯ ಗಂಡು ಕಲೆ ಯಕ್ಷಗಾನ. ಈ ಗಂಡು ಕಲೆಯಲ್ಲಿ ಅನೇಕ ಹಿರಿಯ ಹಾಗೂ ಯುವ ಕಲಾವಿದರು ಕಾಣಸಿಗುತ್ತಾರೆ . ಪ್ರಸ್ತುತ ಈ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಕೂಡ ಇದ್ದಾರೆ ಅನ್ನುವುದು ಅತ್ಯಂತ ಖುಷಿಯ ವಿಷಯ .ನಾವಿಲ್ಲಿ ಪರಿಚಯಿಸ ಹೊರಟಿರುವುದು ಅಂತಹದ್ದೇ ಒಬ್ಬಾಕೆ ಸಾಧಕಿಯನ್ನು.
ದಿನಾಂಕ 11.09.1993 ವಿಟ್ಲದ ಅಬ್ದುಲ್ ಖಾದರ್ ಹಾಗೂ ಮಮ್ತಾಜ್ ಇವರ ಪುತ್ರಿಯಾಗಿ ಜನಿಸಿದ ಶ್ರೀಮತಿ ಅರ್ಷಿಯ ತನು ವಿಟ್ಲ ಇವರಿಗೆ ಇರುವಂತಹ ಯಕ್ಷಗಾನದ ಮೇಲಿನ ಪ್ರೀತಿಗೆ ಯಕ್ಷಪ್ರಿಯೆ ಎಂಬ ಬಿರುದು ಸಿಕ್ಕಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿಟ್ಲದ ಜೆ.ಸಿ.ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಇವರು ಮಂಗಳೂರಿನ ಯುನೈಟೆಡ್ ಟೊಯೊಟಾ ಕಂಪನಿಯಲ್ಲಿ ಉದ್ಯೋಗದಲ್ಲಿ ಇದ್ದಾರೆ.
ಮಂಗಳೂರಿನ ಕದಳಿ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯವನ್ನು ಶ್ರೀ ರಮೇಶ್ ಭಟ್ ಕೆ ಇವರಿಂದ ಕಲಿತು ನಂತರ ಯಕ್ಷಗಾನವನ್ನು ವಿದ್ಯಾಭೂಷಣ ಹಾಗೂ ಶ್ರೀವತ್ಸ ಇವರಿಂದ ಕಲಿಯುತ್ತಿರುವ ಇವರು ಚೆಂಡೆ ಹಾಗೂ ಮದ್ದಳೆ ಅನ್ನು ಗಣೇಶ್ ಇವರಿಂದ ಕಲಿಯುತ್ತಾ ಇದ್ದಾರೆ. ಪ್ರತಿ ವರ್ಷ ನವರಾತ್ರಿಯಲ್ಲಿ ಕದ್ರಿ ದೇವಸ್ಥಾನದಲ್ಲಿ ಇವರು ನೀಡುವ ಯಕ್ಷಗಾನ ಇವರಿಗೆ ಬಹಳ ಖುಷಿ ಕೊಡುತ್ತೆ ಅಂತ ಹೇಳ್ತಾರೆ ಇವರು. ಶಟಲ್ ಬ್ಯಾಡ್ಮಿಂಟನ್ ಹಾಗೂ ಪುಸ್ತಕ ಓದುವುದು ಇವರ ಹವ್ಯಾಸ.
ಯಕ್ಷಗಾನದಲ್ಲಿ ಇವರು ಮಾಡಿರುವ ಹೆಚ್ಚಿನ ವೇಷಗಳು ಬಣ್ಣದ ವೇಷಗಳು. ಮಹಿಷಾಸುರ, ರಕ್ತಬೀಜ, ಶುಂಭಾಸುರ ಹಾಗೂ ಅನೇಕ ಅಸುರ ವೇಷಗಳು . ಮಹಿಷಾಸುರ ವೇಷ ಮಾಡವುದು ಅಂದ್ರೆ ಭಾರೀ ಇಷ್ಟ ಅಂತ ಹೇಳ್ತಾರೆ. ಹಾಗೆಯೇ ಇವರು ಕಲಿತ ಶಾಲೆಯ ಪ್ರಾಂಶುಪಾಲರು ಹಾಗೂ ಇವರು ಕೆಲಸ ಮಾಡುವ ಸಂಸ್ಥೆಯಲ್ಲಿ ತುಂಬಾ ಪ್ರೋತ್ಸಾಹ ನೀಡುತ್ತಾರೆ ಅಂತ ಹೇಳ್ತಾರೆ ಇವರು.
ಇವರಿಗೆ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿರುತ್ತಾರೆ .ಯಕ್ಷರಂಗದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಮ್ಮುಖದಲ್ಲಿ ನಡೆದ ಸಮ್ಮಾನ ನನ್ನ ಜೀವನದ ಒಂದು ಅವಿಸ್ಮರಣೀಯ ಕ್ಷಣ ಅಂತ ಹೇಳ್ತಾರೆ ಇವರು.
ಯಕ್ಷರಂಗದಲ್ಲಿ ಇನ್ನೂ ಅನೇಕ ಸಾಧನೆ ಮಾಡಬೇಕು ಹಾಗೂ ನನ್ನ ಉಸಿರು ಇರುವವರೆಗೂ ಯಕ್ಷಗಾನವನ್ನು ಪ್ರೀತಿಸುವೆ ಹಾಗೂ ಯಕ್ಷಗಾನ ಕಲಿಯಬೇಕು ಎನ್ನುವುದು ನನ್ನ ಆಸೆ ಹಾಗೂ ಈ ರಂಗದಲ್ಲಿ ಇನ್ನೂ ಸಾಧನೆ ಮಾಡಬೇಕು ಅಂತ ನನ್ನ ಜೀವನದ ಗುರಿ ಎಂಬುದು ಇವರ ಮನದ ಮಾತುಗಳು.
ಅರ್ಷಿಯ ಇವರು ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ..
📝
ಶ್ರವಣ್ ಕಾರಂತ್ ಕೆ
Comments
Post a Comment