ಯಕ್ಷ ಸಾಧಕರು ೯೫
ಚೆಂಡೆಯ ಗಂಡುಗಲಿ ರಾಕೇಶ್ ಮಲ್ಯ ಹಳ್ಳಾಡಿ.
ಯಕ್ಷಗಾನ ಇವರಿಗೆ ವಂಶ ಪಾರಂಪರ್ಯವಾಗಿ ಬಂದ ಕಲೆ. ಕಲೆಯ ಬಳುವಳಿ ರಕ್ತಗತವಾಗಿ ಬಂದಾಗ ಆ ಕೆಲಸ ಹೆಚ್ಚು ಸುಲಭವೂ ಹೌದು, ಪ್ರೀತಿ ಪಾತ್ರವೂ ಆಗುತ್ತದೆ ಎನ್ನುತ್ತಾರೆ ಚೆಂಡೆಯ ಗಂಡುಗಲಿ ರಾಕೇಶ್ ಮಲ್ಯ ಹಳ್ಳಾಡಿ.
ಸುಬ್ರಾಯ ಮಲ್ಯ ಹಾಗೂ ಶೋಭಾ ಮಲ್ಯ ಇವರ ಮಗನಾಗಿ ೧೮.೦೪.೧೯೭೧ ರಲ್ಲಿ ಜನನ. ೧೦ನೇ ತರಗತಿವರೆಗೆ ವಿದ್ಯಾಭ್ಯಾಸ. ತಂದೆಯೇ ಯಕ್ಷಗಾನದ ಇವರ ಗುರುಗಳು ಹಾಗೂ ಯಕ್ಷ ರಂಗಕ್ಕೆ ಬರಲು ಪ್ರೇರಣೆ. ಅಜ್ಜ ನಾಗಪ್ಪ ಮಲ್ಯ ಮೃದಂಗವಾದಕ, ದೊಡ್ಡಪ್ಪ ಗಣಪತಿ ಮಲ್ಯ ತಾಳಮದ್ದಳೆ ಅರ್ಥಧಾರಿ, ತಂದೆ ಸುಬ್ರಾಯ ಮಲ್ಯ ಯಕ್ಷಗಾನದ ಹಿಮ್ಮೇಳ ಮುಮ್ಮೆಳ ಎರಡನ್ನೂ ಬಲ್ಲ ಸವ್ಯಸಾಚಿ.
ತಮ್ಮ ೧೮ನೇ ವಯಸ್ಸಿಗೆ ಚೆಂಡೆಯ ಗೀಳು ಹುಟ್ಟಿಸಿಕೊಂಡು ಶಿರಸಿ ಮೇಳಕ್ಕೆ ಸೇರಿದರು. ಮನೆಯಲ್ಲಿ ತೀವ್ರ ಪ್ರತಿರೋಧವಿದ್ದರೂ ಜನಪ್ರಿಯತೆ ಮತ್ತು ಒಳಗಿದ್ದ ಕಲಾವಿದ ಚೆಂಡೆಯ ಗಂಡಾಗುವಂತೆ ಮಾಡಿತು. ಮನೆಯಲ್ಲಾಗಲೀ, ಕೇಂದ್ರಕ್ಕೆ ಹೋಗಿಯಾಗಲೀ, ಎಲ್ಲೂ ಅಭ್ಯಾಸ ಮಾಡದೆ ಕೇವಲ ರಂಗದಲ್ಲೇ ಕಲಿಯುತ್ತಾ ಕಲಿಯುತ್ತಾ ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಇದಕ್ಕೆ ಕಾರಣ ಪರಂಪರೆಯ ಬಳುವಳಿ.
ಪ್ರಾರಂಭದಲ್ಲಿ ಶಿರಸಿ ಮೇಳ, ೬ ವರ್ಷ ಮಂದಾರ್ತಿ ಮೇಳ, ೮ ವರ್ಷ ಸೌಕೂರು ಮೇಳ , ೧೦ ವರ್ಷ ಪೆರ್ಡೂರು ಮೇಳ, ೧ ವರ್ಷ ನೀಲಾವರ ಮೇಳ, ೫ ವರ್ಷದಿಂದ ಸಾಲಿಗ್ರಾಮ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.
ಮಂದಾರ್ತಿ ರಾಮಣ್ಣ ಇವರ ನೆಚ್ಚಿನ ಚೆಂಡೆ ವಾದಕರು. ಶಂಕರ್ ಭಾಗವತ, ಸುನೀಲ್ ಭಂಡಾರಿ, ಪರಮೇಶ್ವರ ಭಂಡಾರಿ ಇವರ ನೆಚ್ಚಿನ ಮದ್ದಳೆ ವಾದಕರು.
ಪೌರಾಣಿಕ ಪ್ರಸಂಗಗಳು ಎಲ್ಲವೂ ಇವರ ನೆಚ್ಚಿನ ಪ್ರಸಂಗಗಳು, ಮುದ್ದಣ್ಣನ ಪ್ರಸಂಗಗಳು, ಕಂದಾವರ ಅವರ ಪ್ರಸಂಗಗಳು, ಕಾಳಿಂಗ ನಾವಡರ ಪ್ರಸಂಗಗಳು, ಡಾ.ಚಂದ್ರಶೇಖರ್ ಅವರ ಪ್ರಸಂಗಗಳು ಹಾಗೂ ದೇವದಾಸ್ ಈಶ್ವರಮಂಗಲ ಇವರ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಇವರ ನೆಚ್ಚಿನ ಭಾಗವತರು ಅನೇಕರು ಅದರಲ್ಲೂ ರಾಘವೇಂದ್ರ ಮಯ್ಯ, ಹೆರಂಜಾಲು ಗೋಪಾಲ್ ಗಾಣಿಗ ಇವರ ನೆಚ್ಚಿನ ಅವರು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಸದಾಭಿರಚಿಯ ಕಲಾ ಪ್ರೇಕ್ಷಕರನ್ನು ಮಾತ್ರ ಇಷ್ಟ ಪಡುತ್ತೇನೆ ಹೊರತು ಕಲಾವಿದನ ಪ್ರೇಕ್ಷಕರನ್ನು ನಾನು ಇಷ್ಟಪಡಲಾರೆ ಎಂದು ಹೇಳುತ್ತಾರೆ ಮಲ್ಯ ಅವರು.
ಕ್ರಿಕೆಟ್ ಹಾಗೂ ವಾಲಿಬಾಲ್ ಇವರ ಆಡುವುದು ಇವರ ಹವ್ಯಾಸಗಳು. ಇವರ ಯಕ್ಷಗಾನದ ರಂಗದ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದರೆ.
೧೫.೧೦.೨೦೦೩ ರಂದು ಸುಮಂಗಲಾ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಸುರಕ್ಷಾ ಹಾಗೂ ಶ್ರೀನಿಧಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Sharath Vasishta, P.K Jain Photography, Sumanth Photography.
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment