ಯಕ್ಷ ಸಾಧಕರು ೩೮
ಯಕ್ಷರಂಗದಲ್ಲಿ ಮಿನುಗುತ್ತಿರುವ ಉಪನ್ಯಾಸಕಿ ಶ್ರೀಮತಿ ವಿನುತ ನಿತೇಶ್ ಪೂಜಾರಿ.
ಇವರಿಗೆ ಪ್ರಚಾರದ ಹಂಗಿಲ್ಲ, ಪ್ರಶಸ್ತಿ ಸನ್ಮಾನಗಳ ಹಂಗಿಲ್ಲ. ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಸಿಕೊಂಡಿರುವ ಪ್ರತಿಭೆ ಶ್ರೀಮತಿ ವಿನುತ ನಿತೇಶ್ ಪೂಜಾರಿ.
ದಿನಾಂಕ ೦೮.೦೩.೧೯೯೪ ರಂದು ದಿ.ಶಿವರಾಮ ಗಟ್ಟಿ ಹಾಗೂ ಜಯಲಕ್ಷ್ಮಿ ಇವರ ಮಗಳಾಗಿ ಜನನ. MSc, B.ED ಇವರ ವಿದ್ಯಾಭ್ಯಾಸ. ಪ್ರಸ್ತುತ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಬಯಾಲಜಿ ಲೆಕ್ಚರರ್. ಕೈರಂಗಳ ಕೃಷ್ಣ ಮೂಲ್ಯ (ಕಟೀಲು ಮೇಳದ ಕಲಾವಿದರು) ಇವರ ಯಕ್ಷಗಾನದ ಗುರುಗಳು.
ಇವರ ಹುಟ್ಟೂರು ಕೈರಂಗಳ.
ಸಣ್ಣ ಪ್ರಾಯದಿಂದ ನನ್ನ ಊರಲ್ಲಿ ಆಗುತ್ತಿದ್ದ ಯಕ್ಷಗಾನ ನೋಡಿ ನನಗೂ ವೇಷ ಮಾಡಬೇಕು ಎಂಬ ಆಸೆ ಹುಟ್ಟಿತ್ತು. 6ನೇ ತರಗತಿಯಲ್ಲಿ ಇರುವಾಗ ನಾನು ಓದುತಿದ್ದ ಶಾಲೆಯಲ್ಲಿ ಶ್ರೀ ಕೃಷ್ಣ ಮೂಲ್ಯ, ನಾಗೇಶ್ ಆಚಾರ್ಯ ಹಾಗೂ ಕೈರಂಗಳ ಗೋಪಾಲ ಕೃಷ್ಣ ಯಕ್ಷಗಾನ ಸಂಘದ ಹಲವು ಸದಸ್ಯರು ಯಕ್ಷಗಾನ ನಾಟ್ಯ ತರಗತಿ ಆರಂಭಿಸಿದರು. ಹಾಗಾಗಿ 2006 ರಿಂದ ಯಕ್ಷಗಾನ ಪಯಣ ಶುರುವಾಯಿತು ಎಂದು ಇವರು ಹೇಳುತ್ತಾರೆ.
ಜಾಂಬವತಿ ಕಲ್ಯಾಣ, ಸುದರ್ಶನ ವಿಜಯ, ಮಾತಂಗ ಕನ್ಯೆ, ತರಣಿ ಸೇನ ಕಾಳಗ, ಕೃಷ್ಣ ಲೀಲೆ, ನರಕಾಸುರ ಮೋಕ್ಷ, ಮಾನಿಷಾದ, ಬಪ್ಪನಾಡು ಕ್ಷೇತ್ರ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು.
ಕೃಷ್ಣ, ತರಣಿಸೇನ, ಶಬರಿ, ಸುದರ್ಶನ, ಮದಿರಾಕ್ಷ, ವಿಷ್ಣು, ಮಾಲಿನಿ ಇತ್ಯಾದಿ ಇವರ ನೆಚ್ಚಿನ ವೇಷಗಳು. ಕೈರಂಗಳ ಗೋಪಾಲ ಕೃಷ್ಣ ಯಕ್ಷಗಾನ ಸಂಘದ ಸದಸ್ಯೆಯಾಗಿ ಹಲವಾರು ಕಡೆ ವೇಷ ಮಾಡಿದ್ದಾರೆ. ಹಾಗೆಯೇ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗಾನ ತಂಡದಲ್ಲಿ ಹಲವಾರು ವೇಷವನ್ನು ಇವರು ಮಾಡಿರುತ್ತಾರೆ. ಸಂಪಾಜೆ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯಲ್ಲಿ , "ನನ್ನ ಪುಂಡು ವೇಷಕ್ಕೆ ತೃತೀಯ ಬಹುಮಾನ ಸಿಕ್ಕಿರುವುದು" ನನ್ನ ಜೀವನದಲ್ಲಿ ಸಿಕ್ಕ ಒಂದು ದೊಡ್ಡ ಪ್ರಶಸ್ತಿ ಎಂದು ಇವರು ಹೇಳುತ್ತಾರೆ. ಮೆಹಂದಿ ಡಿಸೈನಿಂಗ್, ಬುಕ್ ರೀಡಿಂಗ್ ಇತ್ಯಾದಿ ಇವರ ಹವ್ಯಾಸಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಹಿರಿಯರಲ್ಲಿ ಒಮ್ಮೆ ಪ್ರಸಂಗದ ಸಂಪೂರ್ಣ ಚಿತ್ರಣವನ್ನು ಕೇಳಿ ತಿಳಿದುಕೊಳ್ಳುತ್ತೇನೆ. ನಂತರ ನನ್ನ ಪಾತ್ರದ ಬಗ್ಗೆ ತಿಳಿದುಕೊಂಡು, ಪದ್ಯವನ್ನು ನೋಡಿಕೊಂಡು ಅದಕ್ಕೆ ತಯಾರಾಗಿ ರಂಗಕ್ಕೆ ಹೋಗುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ ಇವರು:-
ಕಾಲ ಬದಲಾದ ಹಾಗೆ ಯಕ್ಷಗಾನದ ಶೈಲಿಯೂ ಬದಲಾಗುತ್ತಿದೆ. ಅದರ ಬಗ್ಗೆ ವಿಶ್ಲೇಷಣೆ ಕೊಡುವಷ್ಟು ನಾನು ಬೆಳೆದಿಲ್ಲ. ಯಕ್ಷಗಾನ ಕಲೆಯನ್ನು ಉಳಿಸಿಕೊಂಡು ಹೋಗುವ ಅನೇಕರಲ್ಲಿ ನಾನು ಒಬ್ಬಳು ಹಾಗೂ ಕಲೆಯ ಆರಾಧಕಿ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಹೀಗೆ ಹೇಳುತ್ತಾರೆ:-
ಕಲೆಯನ್ನು ಆರಾಧಿಸುವ ಪ್ರೇಕ್ಷಕರು ಇರುವ ಕಾರಣ ಕಲಾವಿದರಾದ ನಮಗೂ ಬೆಲೆ. ಕಲೆಗೂ ಬೆಲೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಯ ಬಗ್ಗೆ ಕೇಳಿದಾಗ ಇವರು ಹೇಳುವುದು:-
ಶ್ರೀಮತಿ ವಿನುತಾ ನಿತೇಶ್ ಆಗಿ ನನ್ನ ಮನೆಯವರ ಸಂಪೂರ್ಣ ಸಹಕಾರದಿಂದ ಯಕ್ಷಗಾನ ಕಲೆಯನ್ನು ಮುಂದುವರಿಸುತ್ತೇನೆ. ಹಾಗೆಯೆ ಪ್ರಸ್ತುತ ಉಡುಪಿಯಲ್ಲಿ ಇರುವ ಕಾರಣ ಬಡಗುತಿಟ್ಟಿನ ನಾಟ್ಯವನ್ನು ಕಲಿಯಬೇಕು ಎನ್ನುವ ಆಸೆ ಇದೆ.
0೪.೧೧.೨೦೨೦ ರಂದು ವಿನೂತರವರು ಶ್ರೀಯುತ ನಿತೇಶ್ ಪೂಜಾರಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. "ಯಕ್ಷಗಾನದ ಬಗ್ಗೆ ಅತೀವ ಒಲವು ಹೊಂದಿರುವ ಬಾಳಸಂಗಾತಿ ಸಿಕ್ಕಿದ್ದು ನನ್ನ ಪುಣ್ಯ" ಎಂದು ವಿನೂತ ಅವರು ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
Comments
Post a Comment