ಯಕ್ಷ ಸಾಧಕರು ೧೩
ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಸಮರ್ಥ ಪುಂಡುವೇಷಧಾರಿ ವಿಷ್ಣುಶರ್ಮ ವಾಟೆಪಡ್ಪು
ತೆಂಕುತಿಟ್ಟು ಯಕ್ಷಗಾನ ರಂಗವು ಅನೇಕ ಹಿರಿಯ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ.. ಅಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು, ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಸಮರ್ಥ ಪುಂಡುವೇಷಧಾರಿ ಹಾಗೂ ತಾಳಮದ್ದಳೆ ಅರ್ಥಧಾರಿ ಶ್ರೀಯುತ ವಿಷ್ಣುಶರ್ಮ ವಾಟೆಪಡ್ಪು.
ದಿನಾಂಕ 0೭.0೫.೧೯೬೭ ರಂದು ಶ್ರೀ ಸುಬ್ರಾಯ ಭಟ್ ಹಾಗೂ ಶ್ರೀಮತಿ ಪರಮೇಶ್ವರಿ ದಂಪತಿಯರ ಸುಪುತ್ರರಾಗಿ ಜನನ. ಇವರ ವಿದ್ಯಾಭ್ಯಾಸ SSLC. ಶ್ರೀಯುತರ ಯಕ್ಷಗುರುಗಳು ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಸೂರಿಕುಮೇರಿ ಗೋವಿಂದ ಭಟ್.
ಇವರು ಕಳೆದ 28 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಇವರು ಕೃಷ್ಣ, ವಿಷ್ಣು, ಮನ್ಮಥ, ಬಭ್ರುವಾಹನ, ಸುಧನ್ವ, ಶ್ವೇತಕುಮಾರ, ರಾಮ, ಹರಿಶ್ಚಂದ್ರ, ನಳ, ಪರೀಕ್ಷಿತ, ಅತಿಕಾಯ, ಚಂಡ ಮುಂಡರು, ಜಾಬಾಲಿ, ವಿಶ್ವಾಮಿತ್ರ, ಕಚ, ಶುಕ್ರಾಚಾರ್ಯ, ಹೀಗೆ ತುಂಬಾ ವೇಷಗಳನ್ನು ಮಾಡಿರುತ್ತಾರೆ. ಇವುಗಳಲ್ಲಿ ರಾಮ, ಕೃಷ್ಣ, ಸುಧನ್ವ, ನಳ, ಹರಿಶ್ಚಂದ್ರ, ಈಶ್ವರ ಇವರ ಮೆಚ್ಚಿನ ವೇಷಗಳು. ಯಕ್ಷ ಅಭಿಮಾನಿ ಬಳಗ ಸುರತ್ಕಲ್ ನಲ್ಲಿ ನಡೆದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನದಲ್ಲಿ ಇವರು ಮಾಡಿದ ಕೌಶಿಕೆ ಪಾತ್ರ ಯಾವತ್ತಿಗೂ ಒಂದು ಅದ್ಭುತ ಅನುಭವ ಅಂತ ಹೇಳ್ತಾರೆ ಇವರು.
ಇವರ ಯಕ್ಷರಂಗದ ಸಾಧನೆಗೆ ಕೆಲವು ಸಮ್ಮಾನ ಪ್ರಶಸ್ತಿಗಳು ಸಿಕ್ಕಿದೆ. "ಸಮ್ಮಾನ ಪ್ರಶಸ್ತಿಗಳ ಬಗ್ಗೆ ಅಷ್ಟು ಅಪೇಕ್ಷೆ ಇಲ್ಲ" ಎಂದು ಇವರು ಹೇಳುತ್ತಾರೆ.
ಯಕ್ಷಗಾನದ ಹಾಗೂ ಕಟೀಲು ಮೇಳದ ಅನುಭವದ ಬಗ್ಗೆ ಇವರ ಬಳಿ ಕೇಳಿದಾಗ, "ಕಟೀಲು ಮೇಳ ಬದುಕು ಕೊಟ್ಟಿದೆ., ಅಪಾರ ಅನುಭವ, ಗೌರವ, ಅಭಿಮಾನ, ಸ್ನೇಹ ಮತ್ತು ಒಳ್ಳೆಯ ಅನುಭವವನ್ನು ನೀಡಿದೆ" ಎನ್ನುತ್ತಾರೆ. ಯಕ್ಷರಂಗದಲ್ಲಿ ಶ್ರೀಯುತರ ಮೆಚ್ಚಿನ ಕಲಾವಿದರು ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಜೊತೆಗೆ ಮೊದಲ ಎರಡು ವರ್ಷದ ತಿರುಗಾಟ ಯಕ್ಷಗಾನಕ್ಕೆ ಒಂದು ಒಳ್ಳೆಯ ಅಡಿಪಾಯವನ್ನು ನನಗೆ ನೀಡಿತು. ದಿ.ಕುಬಣೂರು ಶ್ರೀಧರ್ ರಾವ್ ಹಾಗೂ ಸುಬ್ರಾಯ ಹೊಳ್ಳ ಕಾಸರಗೋಡು, ತೋಡಿಕಾನ ವಿಶ್ವನಾಥ್ ಗೌಡ ಇವರ ಜೊತೆಗಿನ ತಿರುಗಾಟ ನನ್ನ ಜೀವನದ ಒಂದು ಅವಿಸ್ಮರಣೀಯ ತಿರುಗಾಟ ಎಂದು ಇವರು ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳುವಾಗ ಇವರು ಹೀಗೆ ಹೇಳುತ್ತಾರೆ:-
"ಪ್ರಸಂಗವನ್ನು ಪೂರ್ತಿ ಓದಿ, ಯಾವ ಪುರಾಣ, ಅದರ ಕಾಲಘಟ್ಟ ಸಂಬಂಧವುಳ್ಳ ಪಾತ್ರಗಳು, ಸಂಭಾಷಣೆ, ಪಾತ್ರಕ್ಕೆ ಗೌರವ ಇಷ್ಟನ್ನು ಅರಿತು ರಂಗಸ್ಥಳಕ್ಕೆ ಹೋಗತ್ತೇವೆ".
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
"ಹಿಂದಿನ ಕಾಲದ ಶ್ರದ್ಧೆ ಇಂದು ಇಲ್ಲ. ಕಾಲ ಬದಲಾಗಿದೆ, ಕಠಿಣ ಶ್ರಮ ಕಡಿಮೆಯಾಗಿದೆ. ಪಾತ್ರದಲ್ಲಿ ಪ್ರವೇಶ ಆಗೋದು ಮುಖ್ಯ ಹಾಗೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾತ್ರವನ್ನು ನಿರ್ವಹಿಸುತ್ತಾರೆ".
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- “ಪ್ರೇಕ್ಷಕರು ಹಲವು ವಿಧದವರು. ಸಮಗ್ರ ದೃಷ್ಟಿಕೋನದಿಂದ ನೋಡಿದ್ರೆ ಒಳ್ಳೆಯದು, ಕಲೆಯ ಬೆಳವಣಿಗೆಗೆ ಪ್ರೇಕ್ಷಕರ ಪ್ರೋತ್ಸಾಹ ಬೇಕು. ತಪ್ಪು ದಾರಿಗಳನ್ನು ನಿರ್ಭೀತಿಯಿಂದ ಹೇಳುವವರು ಆಗ್ಬೇಕು".
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಲ್ಲಾಡಿ ಮನೆತನದವರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ. ಪ್ರೇಕ್ಷಕರ ಪ್ರೀತಿ ಸದಾ ನನ್ನ ಮೇಲಿರಲಿ ಎಂಬುದು ಅವರ ಪ್ರಾರ್ಥನೆ.
ಕೃಷಿ ಹಾಗೂ ಪುರಾಣ ಓದುವುದು ಇವರ ಹವ್ಯಾಸವಾಗಿದೆ. ಯಕ್ಷರಂಗದಲ್ಲಿ ಏನಾದರೂ ಯೋಜನೆ ಇದೆಯೇ ಎಂದು ಕೇಳಿದಾಗ, "ಸದ್ಯಕ್ಕೆ ಇಲ್ಲ.. ಕಲಿತದ್ದು ಕಡಿಮೆ, ಇನ್ನಷ್ಟು ಕಲಿತು ಬೆಳೆಯುವ ಆಸೆ ಇದೆ" ಎಂದು ಹೇಳುತ್ತಾರೆ.
ಶ್ರೀಯುತ ವಿಷ್ಣು ಶರ್ಮ ವಾಟೆಪಡ್ಪು ಇವರು ದಿನಾಂಕ 26.12.2011ರಂದು ರೇಖಾ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
Comments
Post a Comment