ಯಕ್ಷ ಸಾಧಕರು ೧೧

ಯಕ್ಷರಂಗದ ಯುವ ಪುಂಡುವೇಷಧಾರಿ ಶಿವಾನಂದ ಶೆಟ್ಟಿ ಪೆರ್ಲ.

ಕೇರಳ ರಾಜ್ಯ, ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಯುವ ಕಲಾವಿದ ಶಿವಾನಂದ ಶೆಟ್ಟಿ ಪೆರ್ಲ.

ದಿನಾಂಕ 18.05.1998ರಲ್ಲಿ ಬಾಲಕೃಷ್ಣ ಶೆಟ್ಟಿ ಹಾಗೂ ವಿಜಯಲಕ್ಷ್ಮಿ ಇವರ ಮೂರು ಜನ ಮಕ್ಕಳಲ್ಲಿ ಹಿರಿಯ ಮಗನಾಗಿ ಜನನ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ. ಅವರ ಮಾತಿನಂತೆ, ಶಾಲಾ ದಿನಗಳಲ್ಲಿ ಯಕ್ಷಗಾನದ ಮೇಲೆ ತುಂಬಾ ಪ್ರೀತಿ ಇದ್ದ ಕಾರಣ ಯಕ್ಷಗಾನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಅವರಿಗೆ ಇತ್ತು.
ಸಬ್ಬಣಕೋಡಿ ರಾಮ ಭಟ್ ಅವರ ಯಕ್ಷಗಾನದ ಗುರುಗಳು. ಯಕ್ಷಗಾನವನ್ನು ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲದಲ್ಲಿ ಕಲಿತರು. ಶಾಲಾ ದಿನಗಳಿಂದಲೇ ಅವರನ್ನು ತಿದ್ದುತ್ತಾ ಬಂದವರು ಸತೀಶ್ ಪುಣಿಂಚಿತ್ತಾಯರು.

ಶಾಲೆಯ ರಜಾದಿನಗಳಲ್ಲಿ ಅವರು ಎಡನೀರು ಹಾಗು ಕಟೀಲು ಮೇಳಗಳಲ್ಲಿ ತಿರುಗಾಟ ಮಾಡಿದ ನಂತರ ಕಳೆದ ಎಂಟು ವರ್ಷಗಳಿಂದ ಕಟೀಲು ಮೇಳದಲ್ಲಿ ಪೂರ್ಣ ರೂಪದ ಸೇವೆಯನ್ನು ಮಾಡುತ್ತಿದ್ದಾರೆ. 
ಮೇಳ ತಿರಗಾಟದ ಅನುಭವವನ್ನು ಕೇಳಿದಾಗ ಅವರು ನೀಡಿದ ಉತ್ತರ ಹೀಗಿತ್ತು; ಕಟೀಲು ಮೇಳ ಒಂದು ಪರಿಪೂರ್ಣ ವಿದ್ಯಾಮಂದಿರ. ಸುಣ್ಣಂಬಳ ವಿಶ್ವೇಶ್ವರ ಭಟ್, ಗೋವಿಂದ ಭಟ್, ಪನೆಯಾಲ ರವಿರಾಜ್, ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಹರಿನಾರಾಯಣ ಭಟ್, ಶಿರಂಕಲ್ಲು ಸಂಜೀವ, ಬೆಳ್ಳಿಪಾಡಿ ಮೋಹನ್ , ಮುಂಡಾಜೆ ರವಿ ಕುಮಾರ್, ಸಾಣೂರು ಮಹೇಶ್ ಕುಮಾರ್ ಇವರು ನನ್ನನ್ನು ನಿತ್ಯವೂ ತಿದ್ದುವವರು ಮತ್ತು ಗುರುಸಮಾನರು ಎಂದು.

ಪೂರ್ವರಂಗದಲ್ಲಿ (ಬಾಲಗೋಪಲ, ಸ್ತ್ರೀ ವೇಷ, ಪೀಠಿಕೆ ಸ್ತ್ರೀ ವೇಷ ), ಕೃಷ್ಣ, ಪ್ರಹ್ಲಾದ, ಮಣಿಕಂಠ, ರಾಮ, ಲಕ್ಷ್ಮಣ, ಚಂಡ, ಮುಂಡ, ಭ್ರಮರಕುಂತಳೆ, ಬಬ್ರುವಾಹನ, ಅಭಿಮನ್ಯು, ಕುಮಾರ, ಮನ್ಮಥ ಹೀಗೆ ಅನೇಕ ವೇಷಗಳನ್ನು ಮಾಡಿರುತ್ತಾರೆ. ಅದರಲ್ಲಿಯೂ ಪ್ರಹ್ಲಾದ, ಲಕ್ಷ್ಮಣ(ಇಂದ್ರಜಿತು ಕಾಳಗ), ಅಭಿಮನ್ಯು, ಬಬ್ರುವಾಹನ ಇವು ಅವರ ನೆಚ್ಚಿನ ಪಾತ್ರಗಳು, ಹಾಗೂ ಎಲ್ಲ ತರಹದ ಪುಂಡು ವೇಷ ಮಾಡುವುದು ಅವರಿಗೆ ತುಂಬಾನೇ ಇಷ್ಟ. ಮಳೆಗಾಲದಲ್ಲಿ ಶ್ರೀಯುತ ಶ್ರೀಧರ ಭಂಡಾರಿಯವರ ಪುತ್ತೂರು ಮೇಳದ ಕಲಾವಿದನಾಗಿ ತಿರುಗಾಟಕ್ಕೆ ಹೋಗುತ್ತಿದ್ದಾರೆ... ಪೆರ್ಲ ಜಗನ್ನಾಥ ಶೆಟ್ಟಿ, ವಸಂತ ಗೌಡ ಕಾಯರ್ತಡ್ಕ, ಚಂದ್ರಶೇಖರ ಧರ್ಮಸ್ಥಳ, ವಾಮನ ಕುಮಾರ ವೇಣೂರು, ದಿವಾಕರ ರೈ ಸಂಪಾಜೆ ಹೀಗೆ ಹಲವು ಹಿರಿಯ ಕಲಾವಿದರ ಒಡನಾಟವನ್ನು ಹೊಂದಿರುತ್ತಾರೆ.

ಲಕ್ಷ್ಮಣ್ ಕುಮಾರ್ ಮರಕಡ ಇವರು ನಡೆಸುವ “ಶುಭವರ್ಣ ಯಕ್ಷ ಸಂಪದ" ಮರಕಡದಲ್ಲಿ ಇದರ ವಾರ್ಷಿಕೋತ್ಸವದ ಸಂದರ್ಭ ಅವರ ಸಂಸ್ಥೆಯಿಂದ ನೀಡುವ ಪ್ರತಿಭಾ ಪುರಸ್ಕಾರ ಹಾಗೂ ಊರಿನಲ್ಲಿ ಕೆಲವು ಸಂಘಗಳಿಂದ ಹಲವು ಪುರಸ್ಕಾರಗಳು ಇವರಿಗೆ ಸಿಕ್ಕಿದೆ.

ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರು ಶ್ರೀಯುತ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಇವರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ. ಪ್ರೇಕ್ಷಕರ ಪ್ರೀತಿ ಸದಾ ನನ್ನ ಮೇಲಿರಲಿ ಎಂಬುದು ಅವರ ಪ್ರಾರ್ಥನೆ.

ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಏನಾದರೂ ಇದೆಯಾ ಎಂದು ಕೇಳುವಾಗ ಇವರು ಕೊಡುವ ಉತ್ತರ "ಯೋಜನೆಗಳನ್ನು ರೂಪಿಸುವಷ್ಟು ನಾನು ಬೆಳೆದಿಲ್ಲ. ಒಬ್ಬ ಉತ್ತಮ ಕಲಾವಿದನಾಗಿ, ಮನೆಯಲ್ಲಿ ಅಣ್ಣನಾಗಿ, ಸಮರ್ಥ ಮಗನಾಗಿ ಬದುಕಬೇಕೆಂಬ ಕನಸು ಇದೆ" ಎಂದು ಹೇಳುತ್ತಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395