ಯಕ್ಷ ಸಾಧಕರು ೭೦

ಯುವ ಯಕ್ಷ ರಂಗಕರ್ಮಿ ಶ್ರೀಯುತ ಶಮಂತ್ ಕುಮಾರ್ ಕೆ ಎಸ್.

ಕರಾವಳಿ ಪ್ರದೇಶದಲ್ಲಿ ಬಹು ಪ್ರಾಮುಖ್ಯತೆಯ ಕಲೆಗಳಲ್ಲಿ ಯಕ್ಷಗಾನ ತನ್ನದೇ ಆದ ವಿಶಿಷ್ಟತೆಯೊಂದಿಗೆ ಗಂಡು ಮೆಟ್ಟಿದ ಕಲೆ ಎಂದೇ ಜನಮಾನಸದಲ್ಲಿ ಬೆಳೆದು ನಿಂತಿದೆ. ಈ ಕ್ಷೇತ್ರದಲ್ಲಿ ಗುರುತಿಸಿಕೊಂಡವರಲ್ಲಿ ಶ್ರೀಯುತ ಶಮಂತ್ ಕುಮಾರ್ ಕೆ ಎಸ್ ಕೂಡ ಒಬ್ಬರು.

ಶ್ರೀಮತಿ ಭಾಗೀರಥಿ ಹಾಗೂ ಶ್ರೀಧರ ಗಾಣಿಗ ಇವರ ಮೂವರು ಮಕ್ಕಳಲ್ಲಿ ಕೊನೆಯ ಪುತ್ರನಾಗಿ ದಿನಾಂಕ ೦೯.೦೬.೧೯೯೩ ರಲ್ಲಿ ಜನಿಸಿದರು. ಎಂ.ಎ ಕನ್ನಡ ಇವರ ವಿದ್ಯಾಭ್ಯಾಸ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಠಾಕೂರರ ನಾಟಕಗಳು ಕುರಿತಾಗಿ ಪಿಎಚ್ಡಿ ಸಂಶೋಧನೆ ಮಾಡುತ್ತಿದ್ದಾರೆ. ಕಳೆದ ೧೨ ವರ್ಷಗಳಿಂದ ಯಕ್ಷಗಾನ ಮತ್ತು ಕಳೆದ ೬ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.ಯಕ್ಷ ಗುರು ನರಸಿಂಹ ತುಂಗ ಹಾಗೂ ಖ್ಯಾತ ಪ್ರಸಂಗಕರ್ತ ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು. ಯಕ್ಷಗಾನ ಮೇಲಿನ ಸಹಜವಾದ ಸೆಳೆತ ಇವರನ್ನು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು ಎಂದು ಶಮಂತ್ ಅವರು ಹೇಳುತ್ತಾರೆ.

ಬಹುತೇಕ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅಂಬೆ, ದಾಕ್ಷಾಯಿಣಿ, ಮಾಲಿನಿ, ಕೃಷ್ಣ, ಶ್ರೀದೇವಿ, ಯೋಜನಾಗಂಧಿ ಇವರ ನೆಚ್ಚಿನ ವೇಷಗಳು. ಅಮೃತೇಶ್ವರಿ ಮತ್ತು ಹಟ್ಟಿಯಂಗಡಿ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ತಿರುಗಾಟ ಮಾಡಿದ ಅನುಭವ ಇದೆ ಎಂದು ಶಮಂತ್ ಅವರು ಹೇಳುತ್ತಾರೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತಿರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ :-
ಆಯಾಯ ಪ್ರಸಂಗದ ಪೂರ್ವ ಚರಿತ್ರೆ, ಪಾತ್ರದ ಹಿನ್ನೆಲೆ-ಮುನ್ನೆಲೆ ಗಳ ವಿವರಗಳು, ಹೊಸ ಪ್ರಸಂಗಗಳಾದಾರೆ  ಆಧುನಿಕ ಅಭಿರುಚಿಗೆ ತಕ್ಕಂತೆ ಗುರುಗಳೊಂದಿಗೆ ಚರ್ಚಿಸಿ ಸಿದ್ಧತೆಯನ್ನು ನಡೆಸುತ್ತೇನೆ ಎಂದು ಶಮಂತ್ ಅವರು ಹೇಳುತ್ತಾರೆ.

ಯಕ್ಷಗಾನದ ಇಂದಿನಿ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಜಾಗತೀಕರಣದ ಪ್ರಭಾವ ಸಾಂಸ್ಕೃತಿಕ ಕ್ಷೇತ್ರವನ್ನು ಬಿಟ್ಟಿಲ್ಲ. ಅದರಲ್ಲಿ ಯಕ್ಷಗಾನವು ಕೂಡ ತನ್ನದೇ ಆದಂತಹ ಬದಲಾವಣೆಗಳನ್ನು ಕಂಡುಕೊಂಡಿದೆ. ಪೂರ್ಣ ರಾತ್ರಿ ನಡೆಯುತ್ತಿದ್ದಂತಹ ಯಕ್ಷ ಪ್ರದರ್ಶನಗಳು ಇಂದು ಕಾಲಮಿತಿಗೊಂಡಿದೆ. ಒತ್ತಡದ ಬದುಕು ಇದಕ್ಕೆ ಕಾರಣವಾಗಿರಬಹುದು.  ಯಕ್ಷಗಾನ ನಶಿಸುತ್ತಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಸಹಜವಾಗಿಯೇ ಇಂದಿನ ಯುವ ಪೀಳಿಗೆ ಯಕ್ಷಗಾನದ ಕಡೆಗೆ ವಾಲುತ್ತಿರುವುದು ಸಂತಸದ ಸುದ್ದಿ ಎಂದು ಶಮಂತ್ ಅವರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಜಾಗತೀಕರಣದ ಜಂಜಾಟ ವ್ಯಕ್ತಿಯ ಸಾಂಸ್ಕೃತಿಕ ಅಭಿರುಚಿಯನ್ನು ಕೂಡ ಬದಲಿಸುತ್ತಿದೆ. ಪೌರಾಣಿಕದ ವ್ಯಾಮೋಹದಿಂದ ಕಳಚಿ ಸಾಮಾಜಿಕ ಪ್ರಸಂಗಗಳನ್ನೇ ಮೆಚ್ಚಿ ಮತ್ತೆ ಪೌರಾಣಿಕ ಪ್ರಸಂಗದ ಕಡೆಗೆ ಆಸಕ್ತಿ ಹೆಚ್ಚುತ್ತಿರುವುದು ಶ್ಲಾಘನೀಯ ಎಂದು ಶಮಂತ್ ಅವರು ಹೇಳುತ್ತಾರೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿದ  ಹಾವೇರಿಯಲ್ಲಿ ಈಗಾಗಲೇ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲು ಸಂಕಲ್ಪಿಸಿದ್ದೇನೆ ಎಂದು ಶಮಂತ್ ಅವರು ಹೇಳುತ್ತಾರೆ.

ವಿವಿಧ ಸಂಶೋಧನಾ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನಗಳ ಪ್ರಕಟಣೆ ಇವರ ಹವ್ಯಾಸಗಳು.
ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಕೊಡ ಮಾಡುವ "ಯಕ್ಷ ಕಿನ್ನರ", "ಕೋಟ ವೈಕುಂಠ  ಸ್ಮಾರಕ ಯುವ ಪುರಸ್ಕಾರ" ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಿರುಸುತ್ತಾರೆ.

ಪ್ರಸ್ತುತ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಹಾವೇರಿ ಇಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

೦೪.೦೧.೨೦೨೧ ರಂದು ಡಾ. ನೇಹಾ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಂದಿರು ಹಾಗೂ ಯಕ್ಷ ಬದುಕಿನ ಬೆಳವಣಿಗೆಗೆ ಸಹಕಾರವಿತ್ತ ಪ್ರತಿಯೊಬ್ಬರ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂಬುದು ಅವರ ಅಂತರಾಳದ ನುಡಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651


Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395