ಯಕ್ಷ ಸಾಧಕರು ೫೮
ಪರಂಪರೆ ನೆಚ್ಚುವ ಯುವ ಕಲಾವಿದ ಉದಯ ಹೆಗಡೆ.
ಶಿರಸಿ ಕಡಬಾಳದ ಮಧುಕೇಶ್ವರ ಹಾಗೂ ಮಹಾದೇವಿ ದಂಪತಿಗಳ ಮಗನಾಗಿ ದಿನಾಂಕ ೨೪.೦೬.೧೯೮೩ ರಂದು ಇವರ ಜನನ. ಡಿಪ್ಲೋಮಾ ಇವರ ವಿದ್ಯಾಭ್ಯಾಸ. ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಕಣ್ಣಿಮನೆ ಗಣಪತಿ ಭಟ್ ಅವರ ಕುಣಿತದ ಅಭಿಮಾನಿಯಾಗಿ ಯಕ್ಷಬದುಕಿಗೆ ಪಾದಾರ್ಪಣೆ ಮಾಡಿದರು.
ಮಂಜುನಾಥ ಭಟ್ ಹೊಸತೋಟ ಹಾಗೂ ಪರಮೇಶ್ವರ ಹೆಗಡೆ ಐನ್ಬೈಲು ಇವರ ಯಕ್ಷಗಾನ ಗುರುಗಳು. ಪೌರಾಣಿಕ ಪ್ರಸಂಗಗಳು ಅಂದ್ರೆ ತುಂಬಾನೇ ಇಷ್ಟ ಪಡುವ ಉದಯ ಹೆಗಡೆ ಅವರು ಯಕ್ಷಗಾನ ರಂಗದಲ್ಲಿ ಎಲ್ಲಾ ವೇಷಗಳನ್ನು ಮಾಡಲು ತುಂಬಾ ಇಷ್ಟ ಎಂದು ಹೇಳುತ್ತಾರೆ.
ತಮ್ಮ ಯಕ್ಷ ಬದುಕಿನಲ್ಲಿ ಯಕ್ಷ ದೇಗುಲ ಮೇಳದಲ್ಲಿ ೩ ವರ್ಷ, ಗುಂಡಬಾಳ ಮೇಳದಲ್ಲಿ ೪ ವರ್ಷ, ಕೆರೆಮನೆ ಮೇಳದಲ್ಲಿ ೧ ವರ್ಷ, ಹಾಲಾಡಿ ಮೇಳದಲ್ಲಿ ೧ ವರ್ಷ ಹಾಗೂ ಪೆರ್ಡೂರು ಮೇಳದಲ್ಲಿ ೯ ವರ್ಷಗಳಿಂದ ಯಕ್ಷಗಾನದ ತಿರುಗಾಟವನ್ನು ಮಾಡುತ್ತಿದ್ದಾರೆ. ಬೇರೆ ಕಲಾವಿದರ ವೇಷಗಳನ್ನು ನೋಡುವುದು, ಪುಸ್ತಕ ಓದುವುದು ಹಾಗೂ ಪಾತ್ರದ ಬಗ್ಗೆ ಚಿಂತನೆ ಮಾಡುವುದು ಇವರ ಹವ್ಯಾಸಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-
ಮೊದಲಿಗೆ ಹೋಲಿಸಿದರೆ ಯಕ್ಷಗಾನದ ಹಲವು ವಿಭಾಗಗಳಲ್ಲಿ ತುಂಬಾ ಸುಧಾರಿಕೆ ಆಗಿದೆ. ಮೊದಲನೆಯದಾಗಿ ಯಕ್ಷಗಾನದಲ್ಲಿ ಆರ್ಥಿಕ ವ್ಯವಸ್ಥೆ, ಎರಡನೆಯದಾಗಿ ಪ್ರೇಕ್ಷಕರ ಸಂಖ್ಯೆ, ಹೇಗೆ ಅಂದರೆ ಅನೇಕ ಮಾಧ್ಯಮಗಳು ಟಿವಿ, ವಾಟ್ಸಪ್, ಫೇಸ್ಬುಕ್ ಮಾಧ್ಯಮಗಳಿದ್ದರೂ ಯಕ್ಷಗಾನಕ್ಕೆ ಅನೇಕ ಯುವ ಕಲಾವಿದರು ಹಾಗು ಯುವ ಪ್ರೇಕ್ಷಕರು ಯಕ್ಷಗಾನಕ್ಕೆ ಬರುತ್ತಿರುವುದು ತುಂಬಾನೇ ಖುಷಿಯ ವಿಷಯ. ಕಲಾವಿದರು ಹಾಗೂ ಯಕ್ಷಗಾನದ ಬಗ್ಗೆ ಹೇಳುವುದಾದರೆ, ಯಕ್ಷಗಾನದಲ್ಲಿ ಅನೇಕ ಸಾಮಾಜಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ಆಡಿಸಲಾಗುತ್ತದೆ. ಇದರಿಂದಾಗಿ ಯುವ ಪ್ರೇಕ್ಷಕರೂ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ. ಹಿಂದಿನ ಕಾಲದ ಯಕ್ಷಗಾನ ಕ್ಷೇತ್ರಕ್ಕೆ ಹೋಲಿಕೆ ಮಾಡಿದರೆ ಇಂದಿನ ಯಕ್ಷಗಾನವು ತುಂಬಾ ಸುಧಾರಣೆಗೊಂಡಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಇಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ತುಂಬಾ ಒಳ್ಳೆಯ ಪ್ರೇಕ್ಷಕರು ಕಾಣಲು ಸಿಗುತ್ತಾರೆ.
ಉದಾಹರಣೆಗೆ, ರಂಗದಲ್ಲಿ ಅಥವಾ ರಂಗದ ಹೊರಗಡೆ ಕಲಾವಿದ ಏನಾದರೂ ತಪ್ಪು ಮಾಡಿದರೆ ಅದನ್ನು ಕಲಾವಿದರ ಬಳಿ ಹೇಳಿ ಅವರ ತಪ್ಪನ್ನು ತಿದ್ದಿಕೊಳ್ಳಲು ಹೇಳುತ್ತಾರೆ, ಇದು ಯಕ್ಷಗಾನ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಎಂದು ಉದಯ ಹೆಗಡೆ ಅವರು ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದಲ್ಲಿಯೇ ಮುಂದುವರೆಯುವುದು, ಹಾಗೂ ಯಕ್ಷಗಾನವು ಒಂದು ಸೀಮಿತ ಪ್ರದೇಶಕ್ಕೆ ಒಳಪಡದೇ ಜಾಗತಿಕ ಮಟ್ಟದಲ್ಲಿ ಪಸರಿಸಿರುವಂತೆ ಮಾಡಬೇಕು ಎಂಬ ಯೋಜನೆ ಇದೆ ಎಂದು ಉದಯ ಹೆಗಡೆ ಅವರು ಹೇಳುತ್ತಾರೆ.
ಅನೇಕ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿವೆ. ಅಭಿಮಾನದ ಮೆಚ್ಚುಗೆಯೇ ಸನ್ಮಾನ ಪ್ರಶಸ್ತಿ ಎಂದು ಉದಯ ಹೆಗಡೆ ಅವರು ಹೇಳುತ್ತಾರೆ.
೧೭-೧೨-೨೦೧೮ರಂದು ಅಶ್ವಿನಿ ಕೊಂಡದಕುಳಿ
ಅವರನ್ನು ಮದುವೆಯಾದ ಶ್ರೀಯುತ ಉದಯ ಹೆಗಡೆ ಅವರು ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photo Click:- Vasu Clicks, Dheeraj Usual, Gagan Bhat Photography, Praveen Perdoor, S.G.Bhagwat Clicks, Yaksha Naveena
✍️
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment