ಯಕ್ಷ ಸಾಧಕರು ೯೩

ಸುಮಧುರ ಕಂಠದ ಭಾಗವತರು ಸುಧೀರ್ ಭಟ್ ಪೆರ್ಡೂರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಸಿದ್ಧ ಕಲೆ ಯಕ್ಷಗಾನ. ಇಂತಹ ಪ್ರಸಿದ್ಧ ಕಲೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಬಡಗುತಿಟ್ಟಿನ ಸುಮಧುರ ಕಂಠದ ಭಾಗವತರು ಸುಧೀರ್ ಭಟ್ ಪೆರ್ಡೂರು.
ದಿ. ಮಾಧವ ಭಟ್ ಹಾಗೂ ಮೀನಾಕ್ಷಿ ಇವರ ಮಗನಾಗಿ ೧೭.೦೧.೧೯೮೩ ರಂದು ಇವರ ಜನನ.  ಎಸ್.ಎಸ್.ಎಲ್. ಸಿ ವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೂ ಯಕ್ಷಗಾನ ನೋಡುತ್ತಾ ಬೆಳೆದ ಕಾರಣ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ಹೇಳುತ್ತಾರೆ ಭಟ್. 
ದಿ.ನಗರ ಸುಬ್ರಹ್ಮಣ್ಯ ಆಚಾರ್ ಇವರ ಯಕ್ಷಗಾನ ಗುರುಗಳು.
೩ ವರ್ಷಗಳಿಂದ ಹಟ್ಟಿಯಂಗಡಿ ಮೇಳದಲ್ಲಿ ತಿರುಗಾಟ ಮಾಡುತ್ತಿರುವ ಭಟ್ ಅವರು ಯಕ್ಷಗಾನ ರಂಗದಲ್ಲಿ ಒಟ್ಟು ೨೦ ವರ್ಷಗಳಿಂದ ಸೇವೆಯನ್ನು ಮಾಡಿದ ಅನುಭವ ಸುಧೀರ್ ಭಟ್ ಅವರದು.
ಚಂದ್ರಹಾಸ ಚರಿತ್ರೆ, ಕರ್ಣಾರ್ಜುನ, ಸುಧನ್ವಾರ್ಜುನ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಭೀಮ್ ಪಾಲಸ್, ಹಿಂದೋಳ ಇವರ ನೆಚ್ಚಿನ ರಾಗಗಳು.

 ದಿ. ಕಾಳಿಂಗ ನಾವಡ, ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಇವರ ನೆಚ್ಚಿನ ಭಾಗವತರು. ದಿ. ದುರ್ಗಪ್ಪ ಗುಡಿಗಾರ್, ದಿ. ಗಜಾನನ ದೇವಾಡಿಗ ಇವರ ನೆಚ್ಚಿನ ಚೆಂಡೆ ಮದ್ದಳೆ ವಾದಕರು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
 ಯಕ್ಷಗಾನ ಮೂಲ ಸ್ವರೂಪ ಕಳೆದುಕೊಳ್ತಾ ಇದೆ. ಕಲಾವಿದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ತನ್ನನ್ನು ಬದಲಾಯಿಸಿಕೊಳ್ಳುವ ಅನಿವಾರ್ಯ ಸ್ಥಿತಿ ಉಂಟಾಗಿದೆ ಎಂದು ಸುಧೀರ್ ಅವರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
೨ ವರ್ಗದ ಪ್ರೇಕ್ಷಕರು ಇದ್ದಾರೆ. ಒಂದನೆಯ ವರ್ಗ ಸಂಪ್ರದಾಯ ಬಯಸಿದರೆ, ಇನ್ನೊಂದು ಹೊಸತನ ಬಯಸುವ ಪ್ರೇಕ್ಷಕರು ಇದ್ದಾರೆ. ಇವರ ನಡುವೆ ಕಲಾವಿದ ಸಂದಿಗ್ಧತೆಗೆ ಒಳಗಾಗುತ್ತಾನೆ ಎಂದು ಸುಧೀರ್ ಅವರು ಹೇಳುತ್ತಾರೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- 
ಯಕ್ಷಗಾನದ ಮೂಲ ಸ್ವರೂಪವನ್ನು ಉಳಿಸುವಲ್ಲಿ ಶ್ರಮಿಸುವ ಆಸೆ ಇದೆ.
ಹೊನ್ನವಳ್ಳಿ ಸಂಘ, ಪೆರ್ಡೂರು ರೋಟರಿ, ಮುಂಬೈ ಯಕ್ಷ ಮಕ್ಕಳ ಮೇಳ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಯಕ್ಷಗಾನ ಕೇಳೋದು ಇವರ ಹವ್ಯಾಸ ಎಂದು ಹೇಳುತ್ತಾರೆ ಸುಧೀರ್ ಅವರು.

೧೯.೧೦.೨೦೦೮ ರಂದು ರಶ್ಮಿ ಅವರನ್ನು ವಿವಾಹವಾಗಿ ಮಗಳು  ಪರ್ವಧಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos By:- Gaja Photography, A.K Digital Saligrama, Ramesh Naresh Manchi.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651


Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395