ಯಕ್ಷ ಸಾಧಕರು ೧೦೭
ಯಕ್ಷಾಶ್ವತ್ಥ, ಯಕ್ಷ ವಾಗ್ವಾರಿಧಿ ಮಂಕಿ ಈಶ್ವರ ನಾಯ್ಕ.
ಬಡಗುತಿಟ್ಟು ಯಕ್ಷಗಾನ ರಂಗದ ಭರವಸೆಯ ಕಲಾವಿದ ಪೌರಾಣಿಕ ಪ್ರಸಂಗಗಳಲ್ಲೂ ಸಾಮಾಜಿಕ ಪ್ರಸಂಗಗಳಲ್ಲೂ ಸಾಹಿತ್ಯಬದ್ಧ ಮಾತುಗಾರಿಕೆಯಿಂದ ಗಮನ ಸೆಳೆಯುತ್ತಿರುವ ಕಲಾವಿದ ಶ್ರೀಯುತ ಮಂಕಿ ಈಶ್ವರ ನಾಯ್ಕ.
ಹೊನ್ನಾವರ ಸಮೀಪದ ಮಂಕಿಯ ದೊಡ್ಡ ಹಿತ್ತಲುನ ಶ್ರೀಮತಿ ಲಕ್ಷ್ಮಿ ಹಾಗೂ ಹನುಮಂತ ನಾಯ್ಕ ದಂಪತಿ ಸುಪುತ್ರನಾಗಿ ೦೧.೦೪.೧೯೭೭ ರಂದು ಜನಿಸಿದರು. ಮಂಕಿಯವರಿಗೆ ಮೂರು ಮಂದಿ ಸಹೋದರರು ಹಾಗೂ ಇಬ್ಬರು ಸಹೋದರಿಯರು. ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಕಿಯಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪೂರೈಸಿರು.
೧೯೯೪ರಲ್ಲಿ ಶ್ರೀಮಯ ಕಲಾಕೇಂದ್ರ ಗುಣವಂತೆ ಕೆರೆಮನೆಯಲ್ಲಿ ದಿವಂಗತ ಶಂಭು ಹೆಗಡೆಯವರ ಗರಡಿಯಲ್ಲಿ ನೃತ್ಯಾಭ್ಯಾಸ ಕಲಿತರು. ಹೆರಂಜಾಲು ಗೋಪಾಲ ಗಾಣಿಗ ಹಾಗೂ ಹೆರಂಜಾಲು ವೆಂಕಟರಮಣ ಗಾಣಿಗರ ನಿರ್ದೇಶನದಲ್ಲಿ ಪರಂಪರೆಯ ಬಡಗುತಿಟ್ಟು ಕಲಾವಿದನಾಗಿ ಮೂಡಿ ಬಂದರು.
೧೯೯೫ರ ಮಾರ್ಚ್ ೩ನೇ ತಾರೀಕು ಶುಕ್ರವಾರ ಬೈಲೂರಿನಲ್ಲಿ(ಉ.ಕ) ಬಾಲ ಗೋಪಾಲ ವೇಷ ಹಾಗೂ ದೇವೇಂದ್ರನ ಬಲ (ವಾಯು) ಪಾತ್ರಕ್ಕೆ ರಂಗಪ್ರವೇಶ ಮಾಡಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ.
ರಂಗಕ್ಕೆ ಹೋಗುವ ಪೂರ್ವದಲ್ಲಿ ಸ್ವಲ್ಪ ಆ ದಿನದ ಪ್ರಸಂಗದ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಮಂಕಿ ಹೇಳುತ್ತಾರೆ.
ಬಾಲ್ಯದಲ್ಲಿ ಸಾಕಷ್ಟು ಆಟ ನೋಡ್ತಿದ್ದೆ. ಸುದರ್ಶನ ಕಾಳಗ, ಸುದರ್ಶನ ವಿಜಯ, ಶ್ವೇತ ಕುಮಾರ ಚರಿತ್ರೆ, ಲವ ಕುಶ ಕಾಳಗ, ಚಂದ್ರಹಾಸ ಚರಿತ್ರ, ಗದಾಯುದ್ದ ಇವರ ನೆಚ್ಚಿನ ಪ್ರಸಂಗಗಳು.
ಕೃಷ್ಣ, ವಿಷ್ಣು, ಚಂದ್ರಹಾಸ, ಮದನ, ರಾಮ, ಶ್ವೇತಕುಮಾರ, ಸಾಲ್ವ, ಸುಧನ್ವ, ಲವಕಶ, ಅಭಿಮನ್ಯು, ಬಬ್ರುವಾಹನ, ಕಲಾಧರ ಇತ್ಯಾದಿ ಇವರ ನೆಚ್ಚಿನ ವೇಷಗಳು.
ಈಶ್ವರಿ ಪರಮೇಶ್ವರಿಯ “ರಾಜವರ್ಮ",ಮಾನಸ ಮಾಂಗಲ್ಯದ “ಭಾಗ್ಯ ವರ್ಧನ",ಅಗ್ನಿ ನಕ್ಷತ್ರದ “ಸಾತ್ವಿಕ" ಇವರಿಗೆ ಹೆಸರು ತಂದುಕೊಟ್ಟ ಪಾತ್ರಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಒಟ್ಟಾರೆಯಾಗಿ ಪರವಾಗಿಲ್ಲ ಎಂದು ಮಂಕಿಯವರು ಹೇಳುತ್ತಾರೆ.
ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆಯಾದ ಪ್ರೇಕ್ಷಕರು. ಒಬ್ಬೊಬ್ಬರ ಅಭಿಪ್ರಾಯವೂ ಬೇರೆ ಬೇರೆ. ಕೆಲವು ಕಡೆಯಲ್ಲಿ ಮಾತಿಗೆ ಬೆಲೆ ಹೆಚ್ಚು, ಕೆಲವು ಕಡೆ ಕುಣಿತ, ಕೆಲವರು ಎರಡನ್ನೂ ಸಮಾನ ಬಯಸುವ ಪ್ರೇಕ್ಷಕರು ಇದ್ದಾರೆ ಎಂದು ಹೇಳುತ್ತಾರೆ ಮಂಕಿ.
ಯಕ್ಷಗಾನದ ಮುಂದಿನ ಯೋಜನೆ ಕೇಳಿದಾಗ ಯಕ್ಷಗಾನ ತರಗತಿ ಆರಂಭಿಸುವ ಯೋಚನೆ ಇದೆ ಎಂದು ಹೇಳುತ್ತಾರೆ ಮಂಕಿ.
ಮಂಕಿಯವರು ಪಡೆದ ಸನ್ಮಾನಗಳು:-
● ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಕಾರವಾರ (ಉ.ಕ) 2011.
● ಕರ್ನಾಟಕ ಕರಾವಳಿ ಮೈತ್ರಿ ಸಂಘ ಹೈದರಾಬಾದ್ 2011 “ನಟಶೇಖರ” ಬಿರುದು.
● ನವೋದಯ ಯುವಕ ಸಂಘ ಜಲವಳ್ಳಿ ಹೊನ್ನಾವರ 2008.
● ದಿ.ಗೋಪಾಲಕೃಷ್ಣ ಆಸ್ರಣ್ಣ ಅಭಿಮಾನಿ ಬಳಗ ಮುಂಬೈ 2011.
● ಸುಧಾಕರ ನಾಯ್ಕ ಭಟ್ಕಳ (ಮುಂಬೈ) ಇವರಿಂದ ಸನ್ಮಾನ ಚಿನ್ನದ ಉಂಗುರ 2011.
● ಮುಂಬೈ ಯಕ್ಷಾಭಿಮಾನಿ ಬಳಗದಿಂದ ಸನ್ಮಾನ 2013.
● ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಬಳಗ ಮಂಕಿ ಇವರಿಂದ “ಯಕ್ಷ ಸಂದೀಪ” ಪುರಸ್ಕಾರ 2013.
● ನಾಗಶ್ರೀ ದತ್ತ ನಿಧಿ ಪ್ರತಿಷ್ಠಾನ ಗೊರಟೆ (ಬೆಳ್ಳೆ) ಶಿರೂರು ಇವರಿಂದ ಸನ್ಮಾನ 2014.
● ದಿ.ಮೋನಪ್ಪ ಹೆಗ್ಡೆ ಸ್ಮರಣಾರ್ಥ ಸನ್ಮಾನ 2013.
● ಯಕ್ಷಾಭ್ಯುದಯ ಬಳಗ ಮುಂಬೈ ಸನ್ಮಾನ 2015.
● ಡಾ. ಹೆಚ್ ಶಾಂತರಾಮ “ಯಕ್ಷ ಭರವಸೆ” ಯಕ್ಷಗಾನ ಪುರಸ್ಕಾರ ೧/೧೧/೨೦೧೫.
● ಯಕ್ಷ ರಕ್ಷ ಮುರುಡೇಶ್ವರ ಇವರಿಂದ ಸನ್ಮಾನ 2016.
● ಯಕ್ಷ ಸಿಂಚನ ಇವರಿಂದ ಸನ್ಮಾನ.
● ಶ್ರೀ ಸೀತಾರಾಮ ಉಪಾಧ್ಯಾಯ ಕೊರ್ಗಿ ಕುಟುಂಬದವರಿಂದ “ಯಕ್ಷಾಶ್ವತ್ಥ” ಬಿರುದು ಸನ್ಮಾನ ೨೭/೪/೨೦೧೭.
● ಶ್ರೀ ಕೊಂಡದಕುಳಿ ರಾಮ ಲಕ್ಷ್ಮಣ ಹೆಗಡೆ ಪ್ರಶಸ್ತಿ 2009.
ಗುಂಡಬಾಳ ಮೇಳದಲ್ಲಿ 9 ವರ್ಷ ಸೇವೆ ಸಲ್ಲಿಸಿ ಬಳಿಕ ಸಾಲಿಗ್ರಾಮ, ಪೆರ್ಡೂರು, ನೀಲಾವರ, ಅಮೃತೇಶ್ವರಿ ಮೇಳಗಳಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದ ಪ್ರಧಾನ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. 2019ರಲ್ಲಿ ದುಬೈ ಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ.
23.04.2006ರಲ್ಲಿ ಚಂದ್ರಕಲಾ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಮೇಘರಾಜ ಹಾಗೂ ಮಾನಸಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By :- Praveen Perdoor, Priya L.G, Vijay Kumar Yalantur.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment