ಯಕ್ಷ ಸಾಧಕರು ೧೧೫

ಯಕ್ಷಗಾನ ರಂಗದ ಯುವ ವೇಷಧಾರಿ ಹಾಗೂ ತಾಳಮದ್ದಳೆ ಅರ್ಥಧಾರಿ ಮಹೇಂದ್ರ ಆಚಾರ್ಯ ಹೆರಂಜೆ.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಹೆರಂಜೆಯ ಪರಮೇಶ್ವರ ಆಚಾರ್ಯ ಹಾಗೂ ರೇವತಿ ಇವರ ಮಗನಾಗಿ ೦೨.೦೬.೧೯೮೯ ರಂದು ಜನನ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇವರ ವಿದ್ಯಾಭ್ಯಾಸ. ಪ್ರಸ್ತುತ ಮಣಿಪಾಲ್ ಎಕಾಡೆಮಿ ಆಫ್ ಹಯರ್ ಎಜುಕೇಶನ್ ಸಂಸ್ಥೆಯಲ್ಲಿ ರಿಸರ್ಚ್ ವಿಭಾಗದಲ್ಲಿ, ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
೨೦೦೬ರಲ್ಲಿ ದಿ.ರಾಘವೇಂದ್ರ ನಾಯ್ಕ್ ಕರಂಬಳ್ಳಿಯವರಿಂದ ತಾಳ ಹಾಗೂ ಹೆಜ್ಜೆಗಾರಿಕೆ ಅಭ್ಯಾಸ, ಆಮೇಲೆ ೨೦೧೧ ರಿಂದ ತೋನ್ಸೆ ಜಯಂತ್ ಕುಮಾರರಿಂದ ರಂಗನಡೆ ಹಾಗೂ ಮುಂದುವರಿದ ಅಭ್ಯಾಸವನ್ನು ಕಲಿಯುತ್ತಿದ್ದಾರೆ.





ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಸ್ವಯಂ ಆಸಕ್ತಿ ಹಾಗೂ ಕೆಲವು ಹಿರಿಯ ಕಲಾವಿದರ ಪ್ರೇರಣೆ. ತಾಳಮದ್ದಳೆ ಅರ್ಥಗಾರಿಕೆಗೆ ದಿ.ವಿಶ್ವನಾಥ ಶೆಟ್ಟಿ, ಸಿಧ್ಧಕಟ್ಟೆ ಹಾಗೂ ಪ್ರೋ.ಪವನ್ ಕಿರಣಕೆರೆಯವರ ಅರ್ಥಗಾರಿಕೆಯ ಶೈಲಿಯಿಂದ ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಹೆರಂಜೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರಸಂಗ ಪ್ರತಿಯಲ್ಲಿರುವ ಪದ್ಯಗಳನ್ನು ಓದಿಕೊಳ್ಳುವುದು, ಅದಕ್ಕೆ ಪೂರಕವಾದ ವಿಷಯಗಳನ್ನು ಪುರಾಣನಾಮ ಚೂಢಾಮಣಿ, ಹಾಗೆಯೇ ಡಾ.ಕೆ.ಎಸ್ ನಾರಾಯಣ ಆಚಾರ್ಯ, ದೇರಾಜೆ ಸೀತಾರಾಮಯ್ಯ, ಅ.ರಾ ಸೇತುರಾಮರಾವ್ ರಂತಹ ಪ್ರಸಿದ್ಧ ಲೇಖಕರ ರಾಮಾಯಣ, ಮಹಾಭಾರತದಂತಹ ಪುಸ್ತಕಗಳಿಂದ, ಹಾಗೇಯೇ ಅನೇಕ ಹಿರಿಯ ಕಲಾವಿದರಿಂದ ಪಾತ್ರದ ನಡೆಯ ಕುರಿತು ಮಾಹಿತಿ ಪಡೆದು ಕೈಲಾದಷ್ಟರ ಮಟ್ಟಿಗೆ ಪಾತ್ರವನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳುತ್ತಾರೆ ಹೆರಂಜೆ.

ಬಹುತೇಕ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಭೀಷ್ಮ, ಪರಶುರಾಮ, ಕೃಷ್ಣ, ರಾಮ, ಅಕ್ರೂರ, ವಾಲಿ, ಸಂಜಯ, ಕೌರವ, ಈಶ್ವರ, ದಕ್ಷ, ಬಲರಾಮ, ರಕ್ತಬೀಜ, ಹನುಮಂತ, ಭೀಮ ಇತ್ಯಾದಿ ಇವರ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಮೊಬೈಲ್, ಇಂಟರ್ನೆಟ್ ಯುಗದಲ್ಲಿ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆಯುವುದು ಈ ಕಾಲಕ್ಕೆ ಒಂದು ದೊಡ್ಡ ಸವಾಲೇ ಆಗಿದೆ. ಹಾಗಾಗಿ
ಕಾಲದ ಜೊತೆಗೆ ಸಂಪ್ರದಾಯಗಳಲ್ಲಿ ಬದಲಾವಣೆಯನ್ನ ಕಾಣಿಸುತ್ತಾ, ಪ್ರೇಕ್ಷಕರಿಗೆ ಮನೋರಂಜನೆಯ ಜತೆಗೆ ಬದುಕಿಗೊಂದು ನೀತಿಯನ್ನು, ಸಂಸ್ಕಾರವನ್ನು, ಭೋದಿಸುತ್ತಾ, ದೈವ ದೇವರುಗಳಲ್ಲಿ, ಪುರಾಣಗಳಲ್ಲಿ ನಂಬಿಕೆಯನ್ನು ಹುಟ್ಟು ಹಾಕುತ್ತಾ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದುವಲ್ಲಿ ಯಕ್ಷಗಾನ ಯಶಸ್ವಿಯಾಗಿದೆ ಎಂದು ಹೇಳುತ್ತಾರೆ ಹೆರಂಜೆ.






ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಒಬ್ಬ ಪ್ರೇಕ್ಷಕ ಯಾವುದೇ ಕಲಾವಿದನನ್ನು ಸ್ಟಾರ್ ಅನ್ನಾಗಿಯೂ ಮಾಡಬಲ್ಲ ಹಾಗೆಯೇ ಕೆಳಗಿಳಿಸಲೂಬಲ್ಲ ಸಾಮರ್ಥ್ಯ ಹೊಂದಿರುತ್ತಾನೆ. ಹಾಗಾಗಿ ಯಾವ ಪ್ರೇಕ್ಷಕನೇ ಆಗಲಿ ಆತ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಬಹಳಷ್ಟು ಯೋಚಿಸಿ ಮುಂದುವರಿಯುವುದು ಕಲೆ , ಕಲಾವಿದನ ಉಳಿವಿಗೆ ಕಾರಣವಾಗಬಲ್ಲದು ಹಾಗೂ ಇದುವರೆಗೆ ನಾ ಹೋದ ಕಾರ್ಯಕ್ರಮಗಳಲ್ಲೆಲ್ಲ ಬೆನ್ನು ತಟ್ಟಿ, ಧೈರ್ಯದ ಮಾತುಗಳನ್ನಾಡಿದ ಅನೇಕ ಪ್ರೇಕ್ಷಕರನ್ನು ನಾನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಹೆರಂಜೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- 
ಯಕ್ಷಗಾನ ನನಗೆ ಉದ್ಯೋಗ ಅಲ್ಲ, ಬದಲಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಹಾಗೆಯೇ ಪುರಾಣಗಳ ಕುರಿತ ಅಧ್ಯಯನಕ್ಕೆ, ಮಾಹಿತಿಗೆ ನನಗೆ ಸಹಾಯಿಯಾಗಿದೆ. ಏನನ್ನೋ ಸಾಧಿಸುವುದಕ್ಕಾಗಿ ಖಂಡಿತಾ ನಾನೀ ಕ್ಷೇತ್ರಕ್ಕೆ ಬಂದವನಲ್ಲ, ಇದರಿಂದ ನನಗೆ ಆತ್ಮತೃಪ್ತಿ ಇದೆ. ಬಹಳಷ್ಟು ಮೇರು ಕಲಾವಿದರ ಒಡನಾಟದ ಸೌಭಾಗ್ಯ ನನಗೆ ದೊರೆತಿದೆ, ಅನೇಕರ ಪ್ರೀತಿ ದೊರೆತಿದೆ, ಮನದೊಳಗೆ ಸಾರ್ಥಕ್ಯ ಭಾವನೆಯಿದೆ.







ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ ಇವರ ಮಾತೃ ಸಂಸ್ಥೆ, ಅಂತೆಯೇ ಬಹುತೇಕ ಸಂಘ ಸಂಸ್ಥೆಗಳಲ್ಲಿ ಸಾಮಾನ್ಯ 200ಕ್ಕೂ ಹೆಚ್ಚು ವೇಷ ಮಾಡಿದ ಅನುಭವ, ಹಾಗೇಯೆ ಪ್ರಸಿದ್ಧ ಕಲಾವಿದರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ, ಹಾಗೆಯೇ ಕಮಲಶಿಲೆ ಮೇಳದಲ್ಲಿ ಹಲವು ಬಾರಿ ಪಾತ್ರ ನಿರ್ವಹಿಸಿದ್ದಾರೆ ಹೆರಂಜೆ.

2014 ರಲ್ಲಿ ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಮಂಡಳಿ, ಕರಂಬಳ್ಳಿ ದಶಮಾನೋತ್ಸವ ಸಂದರ್ಭದಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಉತ್ತಮ ಪುಂಡುವೇಷ ಪ್ರಶಸ್ತಿ, 2017 ರಲ್ಲಿ  ಹೆರಂಜೆ ರಘುರಾಮ ಹೆಗ್ಡೆ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಹೆರಂಜೆ, ಇವರ ವತಿಯಿಂದ ಹುಟ್ಟೂರಿನಲ್ಲಿ ನಡೆದ ಯುವ ಸಾಧಕ ಸನ್ಮಾನ ಹಾಗೂ ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಗೆ ಗೌರವ ಸನ್ಮಾನ ನೀಡಿರುತ್ತಾರೆ.
ಪುಸ್ತಕಗಳನ್ನು ಓದುವುದು, ಹವ್ಯಾಸಿಯಾಗಿ ತಾಳಮದ್ದಳೆ ಅರ್ಥಗಾರಿಕೆ, ಭಜನೆ, ದೈವಿಕ ಕಾರ್ಯಕ್ರಮಗಳಲ್ಲಿ ಚಂಡೆ ವಾದನ ಇವರ ಹವ್ಯಾಸಗಳು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395