ಯಕ್ಷ ಸಾಧಕರು ೧೨೦
ಚಂಡೆಯ ಯಕ್ಷ ನಾದಶ್ರೀ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಶ್ರೀಕಾಂತ ಶೆಟ್ಟಿ ಯಾಡಮೊಗೆ.
೧೮.೧೧.೧೯೮೮ ರಂದು ಶ್ರೀಮತಿ ಪಾರ್ವತಿ ಶೆಡ್ತಿ ಹಾಗೂ ಭುಜಂಗ ಶೆಟ್ಟಿ ಇವರ ಮಗನಾಗಿ ಜನನ. ಎಸ್ ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ. ಇವರ ಸ್ವ ಇಚ್ಛೆಯಿಂದ ಯಕ್ಷಗಾನ ರಂಗಕ್ಕೆ ಬಂದರು. ಕೃಷ್ಣಮೂರ್ತಿ ಭಟ್ ಬಗ್ವಾಡಿ ಇವರ ಚೆಂಡೆ ಮದ್ದಳೆ ಗುರುಗಳು.
ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಾಗೂ ದಿ.ಸತೀಶ್ ಕೆದಿಲಾಯ ಇವರ ಭಾಗವತಿಕೆ ಗುರುಗಳು.
ಬನ್ನಂಜೆ ಸಂಜೀವ ಸುವರ್ಣ, ಗಣೇಶ ನಾಯಕ ಚೇರ್ಕಾಡಿ, ಮಂಜುನಾಥ ಕುಲಾಲ್ ಐರೋಡಿ, ಪ್ರಕಾಶ್ಚಂದ್ರ ಜೋಗಿ ಪೇತ್ರಿ ಇವರ ನಾಟ್ಯ ಗುರುಗಳು. ಒಟ್ಟಿನಲ್ಲಿ ಹೇಳಬೇಕಾದರೆ ಇವರೊಬ್ಬರು ಯಕ್ಷಗಾನ ರಂಗದ ಎಲ್ಲಾ ವಿಭಾಗ ಕಲಿತ ಒಬ್ಬ ಅಪರೂಪದ ಕಲಾವಿದರು.
ರಾಮಕೃಷ್ಣ ಮಂದಾರ್ತಿ, ಗಣೇಶ್ ಗಾಂವ್ಕರ್ ಹಳುವಳ್ಳಿ ಇವರ ನೆಚ್ಚಿನ ಚೆಂಡೆ ವಾದಕರು.
ಸುನೀಲ್ ಭಂಡಾರಿ, ಎನ್.ಜಿ. ಹೆಗಡೆ, ಬಾಲಕೃಷ್ಣ ಗಾಣಿಗ ಹೆರಂಜಾಲು ಇವರ ನೆಚ್ಚಿನ ಮದ್ದಳೆ ವಾದಕರು.
ಗೋಪಾಲ ಗಾಣಿಗ ಹೆರಂಜಾಲು, ದಿ.ನಗರ ಸುಬ್ರಹ್ಮಣ್ಯ ಆಚಾರ್ಯ ಇವರ ನೆಚ್ಚಿನ ಭಾಗವತರು.
ಪಟ್ಟಾಭಿಷೇಕ, ಕರ್ಣಾರ್ಜುನ, ಶಶಿಪ್ರಭೆ, ಶ್ವೇತಕುಮಾರ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನ ರಂಗದಲ್ಲಿ ಇವರಿಗೆ ವೇಷ ಹಾಗೂ ಭಾಗವತಿಕೆ ಮಾಡುವ ಆಸಕ್ತಿ ಇದೆ ಎಂದು ಯಾಡಮೊಗೆ ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ :-
ಹಿಂದೆ ಹಿಮ್ಮೇಳವನ್ನು ಅನುಸರಿಸುತ್ತಿದ್ದರು ಮುಮ್ಮೇಳದವರು. ಆದರೆ ಈಗ ಮುಮ್ಮೇಳದವರಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಹಿಂದೆ ಭಾಗವತನೇ ಸೂತ್ರಧಾರ, ಇವಾಗ ಆ ಸಂಖ್ಯೆಯೇ ವಿರಳವಾಗಿದೆ ಎಂದು ಹೇಳುತ್ತಾರೆ ಯಾಡಮೊಗೆ.
ಯಕ್ಷಗಾನ ರಂಗದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ :-
ಒಳ್ಳೆಯದನ್ನು ಗ್ರಹಿಸುವವರ ಸಂಖ್ಯೆ ತುಂಬಾ ಕಡಿಮೆ. ಕೂಗುವವನೇ ಭಾಗವತ. ಹಾರಿ ಬೀಳುವವನೇ ಕಲಾವಿದ. ಜೋರಾಗಿ ಸ್ವರ ತರುವವನೇ ಚಂಡೆ ಮದ್ದಳೆಗಾರ ಎನ್ನುವ ಅಭಿಪ್ರಾಯ. ಇದು ಯಕ್ಷಗಾನದ ದುರಾದೃಷ್ಟ ಎಂದು ಯಾಡಮೊಗೆ ಹೇಳುತ್ತಾರೆ.
ಯಕ್ಷಗಾನದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ; ಯಕ್ಷಗಾನಕ್ಕೆ ಒಳ್ಳೆಯ ಶಿಷ್ಯರನ್ನು ಕೊಡುವುದು ನನ್ನ ದೊಡ್ಡ ಯೋಜನೆ ಎಂದು ಯಾಡಮೊಗೆ ಹೇಳುತ್ತಾರೆ.
೧೫ ವರ್ಷದಿಂದ ಮಂದಾರ್ತಿ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.
ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆ ನೋಡಿ ಪ್ರಶಸ್ತಿ ಹಾಗೂ ಸನ್ಮಾನ ನೀಡಿ ಗೌರವಿಸಿದ್ದಾರೆ. ಕೃಷಿ ಹೈನುಗಾರಿಕೆ ಇವರ ಹವ್ಯಾಸಗಳು.
೨೦.೦೫.೩೦೧೫ ರಂದು ಸುಮಿತ್ರಾ ಶೆಟ್ಟಿ ಇವರನ್ನು ವಿವಾಹವಾಗಿ ಮಗ ಸಾತ್ವಿಕ್ ಶೆಟ್ಟಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment