ಯಕ್ಷ ಸಾಧಕರು ೧೨೧
ಬಹುಮುಖ ಪ್ರತಿಭೆ ಅಪೂರ್ವ ಆರ್ ಸುರತ್ಕಲ್.
ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಹೀಗೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದೆ ಅಪೂರ್ವ ಆರ್ ಸುರತ್ಕಲ್.
೧೫.೦೩.೧೯೯೬ ರಂದು ರೂಪ ರಮೇಶ್ ಹಾಗೂ ರಮೇಶ್ ಟಿ ಎನ್ ದಂಪತಿಯರ ಪುತ್ರಿಯಾಗಿ ಜನನ. ಸೈಂಟ್ ಎಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ಎಂಎಸ್ಸಿ ಮ್ಯಾಥಮೆಟಿಕ್ಸ್ ಸ್ನಾತಕೋತ್ತರ ಪದವಿಯನ್ನು ಪಡೆದು, ಪ್ರಸ್ತುತ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಕಾಪು ಇಲ್ಲಿನ ಶಿಕ್ಷಕಿ. ತಂದೆ ರಮೇಶ್ ಟಿ ಎನ್ ಪ್ರೇರಣೆಯಿಂದ ಚೆಂಡೆ ಮದ್ದಳೆ ಕಲಿತೆ ಎಂದು ಹೇಳುತ್ತಾರೆ ಅಪೂರ್ವ. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ವಿದ್ವಾನ್ ಚಂದ್ರಶೇಖರ ನಾವಡ ಇವರಿಂದ ಭರತನಾಟ್ಯ ಹಾಗೂ ಶ್ರೀಮತಿ ಮನೋರಂಜನಿ ಇವರಿಂದ ಚಿತ್ರಕಲಾ ಶಿಕ್ಷಣವನ್ನು ಪಡೆದಿರುತ್ತಾರೆ. ತಮ್ಮ ೧೧ನೇ ವಯಸ್ಸಿಗೆ ಚೆಂಡೆ-ಮದ್ದಳೆ ಅಭ್ಯಾಸವನ್ನು ಪ್ರಾರಂಭಿಸಿ, ೧೫ನೇ ವಯಸ್ಸಿನಿಂದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಸುದರ್ಶನ ವಿಜಯ ಇವರ ನೆಚ್ಚಿನ ಪ್ರಸಂಗ. ಇವರ ಗುರುಗಳು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು. ಪ್ರಸಾದ್ ಬಲಿಪರು ಇವರ ನೆಚ್ಚಿನ ಭಾಗವತರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ರಂಗದಲ್ಲಿ ಒಳ್ಳೆಯ ಪ್ರೋತ್ಸಾಹ ಎಲ್ಲರಿಂದ ಸಿಗುತ್ತದೆ, ಎಲ್ಲರೂ ಯಕ್ಷಗಾನದ ಉಳಿವಿನ ಬಗ್ಗೆ ಮಾತನಾಡುತ್ತಾರೆ. ಯಕ್ಷಗಾನವನ್ನು ಉಳಿಸುವ ಅಗತ್ಯತೆ ಇಲ್ಲ, ಯಾಕಂದರೆ ಯಕ್ಷಗಾನಕ್ಕೆ ಅಳಿವಿಲ್ಲ, ಇನ್ನೇನಿದ್ರು ಅದನ್ನು ಬೆಳೆಸುವಲ್ಲಿ ಮಾತ್ರ ನಮ್ಮ ಗಮನ ಅಷ್ಟೇ. ಯಕ್ಷಗಾನವು ಇಂದಿನ ದಿನದಲ್ಲಿ ಬಹು ಬೇಡಿಕೆಯ ಕಲೆಯಾಗಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರೇಕ್ಷಕರ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರೇಕ್ಷಕರ ಮನ ಮುಟ್ಟಲು ನಿರಂತರ ಅಭ್ಯಾಸ, ಅಧ್ಯಯನ ಅಗತ್ಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನ ರಂಗದಲ್ಲಿ ಒಳ್ಳೆಯ ಹಿಮ್ಮೇಳ ಗುರು ಆಗಬೇಕು ಎಂಬ ಕನಸು ಇದೆ.
ಇಂಟರ್ನ್ಯಾಷನಲ್ ಲೆವೆಲ್ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರು, ಗಡಿನಾಡ ಸಾಹಿತ್ಯ ಸಮ್ಮೇಳನ ಕೇರಳ, ಯಕ್ಷಗಾನ ಬಯಲಾಟ ಅಕಾಡೆಮಿ ಪ್ರೋಗ್ರಾಮ್ ಮುಂಬೈ, ಕರ್ನಾಟಕ ಸಂಘ ಚೆನ್ನೈ, ಆಕಾಶವಾಣಿ ಚೆನ್ನೈ, ಆಳ್ವಾಸ್ ವಿರಾಸತ್ ಮೂಡಬಿದ್ರೆ ಮುಂತಾದ ಕಡೆಗಳಲ್ಲಿ ತಮ್ಮ ಪ್ರದರ್ಶನವನ್ನು ನೀಡಿರುತ್ತಾರೆ. ಅಲ್ಲದೆ ಈಕೆ ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆ.
ಧರ್ಮಸ್ಥಳ ಮೇಳ, ಕಟೀಲು ಮೇಳ, ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮೇಳಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಅಲ್ಲದೆ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್, ಯಕ್ಷ ಮಂಜುಳಾ ಮಹಿಳಾ ಟೀಮ್ ಕದ್ರಿ, ಕರ್ನಾಟಕ ಸಂಘ ಮಹಿಳಾ ಯಕ್ಷಗಾನ ಮಂಡಳಿ ಚೆನ್ನೈ ಸಂಘಗಳ ಸದಸ್ಯೆ.
ಸನ್ಮಾನ ಹಾಗೂ ಪ್ರಶಸ್ತಿಗಳು :-
● ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಅಕಾಡೆಮಿಯಿಂದ “ರಾಜ್ಯೋತ್ಸವ ಸಾಧಕ ಪ್ರಶಸ್ತಿ”.
● ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ವತಿಯಿಂದ “ಜ್ಞಾನಶ್ರೀ” ರಾಜ್ಯಪ್ರಶಸ್ತಿ.
● ಕರಾವಳಿ ಕೇಸರಿ ವಾರ್ತಾಪತ್ರಿಕೆ ಮಂಗಳೂರು ವತಿಯಿಂದ “ಕಲಾ ಕೇಸರಿ” ಪ್ರಶಸ್ತಿ.
● ದ ಸೌತ್ ಕೆನರಾ ದ್ರಾವಿಡ ಬ್ರಾಹ್ಮಣ ಅಸೋಸಿಯೇಷನ್, ಚೆನ್ನೈ ವತಿಯಿಂದ “ಯಂಗ್ ಆಚೀವರ್” ಪ್ರಶಸ್ತಿ.
ಕಲಾಸಂಗಮ ಕಲ್ಚರಲ್ ಟ್ರಸ್ಟ್ ಮಂಗಳೂರು, ಕರ್ನಾಟಕ ಕೇರಳ ಗಡಿನಾಡ ಸಾಹಿತ್ಯ ಸಮ್ಮೇಳನ, ಶ್ರೀ ಕೃಷ್ಣ ಯಕ್ಷಸಭಾ ಮಂಗಳೂರು, ಯಕ್ಷಗಾನ ಕಲಾ ಮಂಡಳಿ ಪಣಂಬೂರು, ಮುಂಬೈ ಯಕ್ಷಗಾನ ಅಕಾಡೆಮಿ, ಹಾಗೂ ಮುಂತಾದ ಕಡೆಗಳಲ್ಲಿ ಇವರ ಯಕ್ಷಗಾನ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.
ಭರತನಾಟ್ಯ, ಚಿತ್ರಕಲೆ, ಕಾರ್ಯಕ್ರಮ ನಿರೂಪಣೆ ಇವರ ಹವ್ಯಾಸಗಳು.
೨೧.೦೨.೨೦೨೧ ರಂದು ಅಶ್ವಿನ್.ಎಲ್.ತಂತ್ರಿ ಇವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment