ಯಕ್ಷ ಸಾಧಕರು ೧೨೫
ಬಹುಮುಖ ಪ್ರತಿಭೆ ಮೈತ್ರಿ ಭಟ್ ಮವ್ವಾರು
ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ, ಕಲೆಗಳೊಂದಿಗೆ ಮೈತ್ರಿ ಬೆಳೆಸಿಕೊಂಡ ಕಲಾವಿದೆ. 3 ನೇ ವರುಷದ ಮಗುವಿನಿಂದಲೇ ಬಣ್ಣ ಹಚ್ಚಿಸಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮುದ್ದುಕೃಷ್ಣನಾಗಿ ಪ್ರಥಮ ಬಹುಮಾನವನ್ನು ಪಡೆದು ಊರಿನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿ, ಬಣ್ಣಗಳೊಂದಿಗೆ ನಂಟನ್ನ ಬೆಳೆಸಿದರು. ಮುಂದೆ ಶಾಲಾ ಕಾಲೇಜ್ ದಿನಗಳಲ್ಲಿ ಕೇರಳ ಕಲೋತ್ಸವಗಳಲ್ಲಿ ನಾಟಕ, ಭರತನಾಟ್ಯಂ, ಕೂಚುಪುಡಿ, ಮೋಹಿನಿಯಾಟ್ಟಂ, ಕೇರಳನಟನಂ, ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದು " ಉತ್ತಮ ಅಭಿನೇತ್ರಿ" ಕೀರ್ತಿಗೆ ಪಾತ್ರರಾದವರು.
ಕಾಸರಗೋಡಿನ ಮವ್ವಾರಿನಲ್ಲಿ ಜನನ. ಚಂದ್ರಿಕಾ ಭಟ್ ಹಾಗೂ ಗಣಪತಿ ಭಟ್ ಇವರ ತಂದೆ ತಾಯಿ ಹಾಗೂ ಮಿಥುನ್ ಭಟ್ ಇವರ ಸಹೋದರ. ಒಟ್ಟಾಗಿ ಕಲಾಸಕ್ತಿ ತುಂಬಿರುವ ಕುಟುಂಬ. ಅಮ್ಮ ಚಂದ್ರಿಕಾ ಭಟ್ ಕಲಾವಿದೆಯೂ, ಯಕ್ಷಗಾನ ಛಾಯಾಗ್ರಾಹಕಿಯೂ, ಮೈತ್ರಿ ಅವರ ಮೊದಲ ಗುರುವೂ ಹೌದು. ಇವೆಲ್ಲವೂ ಇವರ ಕಲಾ ಬೆಳವಣಿಗೆಗೆ ಪೂರಕವಾಯ್ತು ಎನ್ನುತ್ತಾರೆ ಕಲಾವಿದೆ ಮೈತ್ರಿ ಭಟ್ .
MSc computer science ವಿದ್ಯಾಭ್ಯಾಸವನ್ನು ವ್ಯಾಸಂಗ ಮಾಡುತ್ತಿದ್ದಾರೆ. ಯಕ್ಷಗಾನದ ಗುರುಗಳ ಬಗ್ಗೆ ಕೇಳಿದಾಗ ಸನಾತನ ಯಕ್ಷಾಲಯದ ಯಕ್ಷಗುರು ರಾಕೇಶ್ ರೈ ಅಡ್ಕ ಇವರ ಗುರುಗಳು ಮೈತ್ರಿ ಅವರಿಗೆ ವಿಧವಿಧವಾದ ಪಾತ್ರಗಳನ್ನು ಕೊಟ್ಟು, ಹಲವು ಅವಕಾಶಗಳನ್ನ ಕೊಟ್ಟು ಬೆಳೆಸಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಶಾಲಾದಿನಗಳಲ್ಲಿ ಬಾಲ್ಯದಲ್ಲಿಯೇ ಯಕ್ಷಗಾನ ವೇಷ ಮಾಡುವ ಅವಕಾಶ ಸಿಕ್ಕಿತ್ತು. ಪ್ರಹ್ಲಾದನಾಗಿ ಮೊದಲ ಬಾರಿಗೆ ರಂಗಪ್ರವೇಶ ಮಾಡಿ, ಆಮೇಲೆ ಹೈಸ್ಕೂಲ್ ದಿನಗಳಲ್ಲಿ ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಗುರು ಪಡುಮಲೆ ಜಯರಾಮ ಪಾಟಾಳಿಯವರ ತರಬೇತಿ. ಹಾಗೆಯೇ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕದಲ್ಲಿ ಗುರು ಸೂರ್ಯನಾರಾಯಣ ಪದಕಣ್ಣಾಯರ ತರಬೇತಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮುಂದಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರು ಸೇರಿದಾಗ, ಸಿದ್ಧಿವಿನಾಯಕ ಯಕ್ಷ ನಾಟ್ಯಕಲಾ ಕೇಂದ್ರ, ಗುರು ರಕ್ಷಿತ್ ಪಡ್ರೆ ಅವರಲ್ಲಿ ನಾಟ್ಯ ಕಲಿಯುವಿಕೆ ಹಾಗೂ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಮುಂದೆ "ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ" ಇದರ ನಿರ್ದೇಶಕಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಪೂರ್ಣಿಮಾ ಯತೀಶ್ ರೈ ಇವರ ತಂಡದೊಂದಿಗೆ ಬೆಂಗಳೂರು, ಮುಂಬಯಿ ಇನ್ನೂ ಹಲವು ಕಡೆಗಳಲ್ಲಿ ಪ್ರದರ್ಶನವನ್ನು ನೀಡಿರುತ್ತಾರೆ. ಶ್ರೀ ವೆಂಕಟ್ರಮಣ ಕಲಾ ಸಂಘ ಕಾಸರಗೋಡು ಇದರ ಸಂಸ್ಥಾಪಕರೂ ,ಯಕ್ಷಗಾನ ಸಂಘಟಕರೂ ಆಗಿರುವ ವೆಂಕಟ್ರಮಣ ಹೊಳ್ಳ , ರಾಮಕೃಷ್ಣ ಹೊಳ್ಳ ಇವರ ತುಂಬು ಪ್ರೋತ್ಸಾಹವೂ ಇವರಿಗಿದೆ.
ಇನ್ನು ಗುರುಗಳಾದ ರಾಕೇಶ್ ರೈ ಅಡ್ಕ ಇವರ ನಿರ್ದೇಶನದಲ್ಲಿ, ಮಾಧವ ಶೆಟ್ಟಿ ಬಾಳ ಇವರ ಮುಂದಾಳತ್ವದಲ್ಲಿ ಮುಂಬಯಿಯಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವೆಲ್ಲವೂ ನನಗೆ ಹೊಸ ಹೊಸ ಅನುಭವಗಳನ್ನ ತಂದು ಕೊಟ್ಟಿದೆ. ಹಾಗೆಯೇ ಇಲ್ಲಿ ಹೆಸರಿಸಿದ ಎಲ್ಲಾ ಹಿರಿಯರೂ ನನ್ನ ಬೆಳವಣಿಗೆಗೆ ಕಾರಣರಾದರು ಎಂದು ಮೈತ್ರಿ ಭಟ್ ಹೇಳುತ್ತಾರೆ.
ಗುರು ವಿದುಷಿ ಸುಮಂಗಲಾ ರತ್ನಾಕರ್ ಅವರಲ್ಲಿ ಭರತನಾಟ್ಯಂ ಕಲಿತ ಇವರು ವಿದ್ವತ್ ಪೂರ್ವ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ distinction ಲ್ಲಿ ಪಾಸಾಗಿದ್ದಾರೆ .
ಮೋಹಿನಿಯಾಟ್ಟಂ, ಕೂಚುಪುಡಿ, ಕೇರಳನಟನಂ ಗುರು ಕಲಾಮಂಡಲಂ ವಿಮಲಾದೇವಿ ಅವರಲ್ಲಿ ಕಲಿತರು .
ಯಕ್ಷಗಾನದಲ್ಲಿ ಬರುವ ಎಲ್ಲಾ ಪಾತ್ರಗಳು ಇಷ್ಟ. ಅದರಲ್ಲಿಯೂ ಕಿರೀಟ ವೇಷಗಳಾದ ಕೌರವ, ಕರ್ಣಾರ್ಜುನದ ಕರ್ಣನಾಗಿ, ಇಂದ್ರಜಿತು ಕಾಳಗದ ಇಂದ್ರಜಿತುವಾಗಿ, ಅರ್ಜುನನಾಗಿ, ಹೀಗೆ ಹಲವು ಪಾತ್ರಗಳನ್ನು; ಹಾಗೆಯೇ ಮಹಿಷನಾಗಿ, ಕೃಷ್ಣ, ವಿಷ್ಣು , ಮನ್ಮಥ, ರುಕ್ಮಾಂಗ, ರಾಧೆ, ಸುಭದ್ರೆ, ಮೋಹಿನಿ, ದೇವಿಮಹಾತ್ಮೆಯ ಶ್ರೀದೇವಿ ಹೀಗೆ ಕೆಲವು ವೇಷಗಳಲ್ಲಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.
ಹಲವು ಬಹುಮಾನಗಳು, ಸನ್ಮಾನಗಳು ದೊರಕಿವೆ. ಮುಂಬೈಯಲ್ಲಿ ದೊರೆತಿರುವ ಎರಡು ಸನ್ಮಾನಗಳು ಬಹಳ ಖುಷಿ ಆಗಿದೆ ಎಂದು ಮೈತ್ರಿ ಹೇಳುತ್ತಾರೆ.
ಯಕ್ಷಗಾನದ ಪ್ರೇಕ್ಷಕರು ಕಾರ್ಯಕ್ರಮ ಮುಗಿದ ಮೇಲೆ ಹತ್ತಿರ ಬಂದು ಅಭಿನಯ ತುಂಬಾ ಚೆನ್ನಾಗಿತ್ತು, ಪಾತ್ರಕ್ಕೆ ಜೀವ ತುಂಬಿದ್ದೀರಿ, ಚೆನ್ನಾಗಿ ನಿರ್ವಹಿಸಿದ್ದೀರ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿದವರು ಅನೇಕರು. ಕಲಾವಿದನಿಗೆ ಅತಿ ದೊಡ್ಡ ಸಂಮಾನ ಇದುವೆ ಎಂಬುದು ಇವರ ಅನಿಸಿಕೆ.
ಮುಂದೇನಾಗುವ ಆಸೆ ಎಂದು ಕೇಳಿದಾಗ ನಾನೀಗ ಅಭ್ಯಸಿಸುತ್ತಿರುವ ಯಾವುದಾದರೂ ವಿಷಯದಲ್ಲಿ ಪಿ.ಎಚ್.ಡಿ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಇದೆ ಮುಂದೆ ಎಲ್ಲವೂ ದೇವರ ಇಚ್ಚೆ ಎಂದು ಮೈತ್ರಿ ಹೇಳುತ್ತಾರೆ.
ಪುರಾಣ ಪುಸ್ತಕಗಳ ಓದುವಿಕೆ, ಕಲಾಸ್ವಾದನೆ, ಬೈಕ್ ರೈಡಿಂಗ್ ಇವೆಲ್ಲಾ ಇವರ ಹವ್ಯಾಸಗಳು.
ನಿಮ್ಮಂತಹ ಬರಹಗಾರರು, ಯಕ್ಷ ಛಾಯಾಗ್ರಾಹಕರು ಕೂಡ ನಮ್ಮಂತಹ ಕಲಾವಿದರ ಬೆಳವಣಿಗೆಗೆ ಕಾರಣರು ಇದನ್ನು ಮರೆಯುವಂತಿಲ್ಲ ಎಂಬುದು ಮೈತ್ರಿಯವರ ಮನದಾಳದ ಮಾತುಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Vijay Kumar yalanthur, Sudarshan Mandarthi, Prashanth Malyadi, Natesh Vitla Photos, Kiran Vitla Photography, Chandrika Bhat Movvar.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment