ಯಕ್ಷ ಸಾಧಕರು ೧೭೬
"ಯಕ್ಷಗಾನ ರಂಗದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರ ಪ್ರಜ್ವಲ್ ಕುಮಾರ್."
ಯುವ ಜನತೆ ನೃತ್ಯ, ಸಂಗೀತ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಈ ದಿನಗಳಲ್ಲಿ, ಆ ಮಾತಿಗೆ ಅಪವಾದದಂತೆ ಯಕ್ಷಗಾನವನ್ನೇ ತನ್ನ ಜೀವಾಳವನ್ನಾಗಿಸಿ ಯಕ್ಷಗಾನ ರಂಗದಲ್ಲಿನ ಹೆಚ್ಚಿನ ಎಲ್ಲಾ ವೇಷ ಪ್ರಕಾರಗಳಲ್ಲೂ ಪಳಗಿರುವ ಅದರಲ್ಲೂ ಪ್ರಮುಖವಾಗಿ ಬಣ್ಣದ ವೇಷಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ತರುಣರೊಬ್ಬರು ನಮ್ಮ ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಅವರೇ ಗುರುವಾಯನಕೆರೆಯ ಬೇಬಿ ಶೆಟ್ಟಿ ಹಾಗೂ ಸಂಪ ಶೆಟ್ಟಿ ದಂಪತಿಯರ ಸುಪುತ್ರ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ೦೯.೦೫.೧೯೮೭ ರಂದು ಇವರ ಜನನ.
ಬಾಲ್ಯದ ದಿನಗಳಲ್ಲಿ ಗುರುವಾಯನಕೆರೆಯ ಸುತ್ತಮುತ್ತ ಸಾಕಷ್ಟು ಟೆಂಟಿನ ಮೇಳಗಳು ಯಕ್ಷಗಾನವನ್ನು ಆಡುತ್ತಿದ್ದವು, ಆ ಬಯಲಾಟಗಳನ್ನು ತಪ್ಪದೇ ವೀಕ್ಷಿಸುತ್ತಿದ್ದ ಪ್ರಜ್ವಲ್ ತಾನೂ ಒಬ್ಬ ಯಕ್ಷಗಾನ ಕಲಾವಿದನಾಗಬೇಕೆಂಬ ಹಂಬಲದಿಂದ ಯಕ್ಷಗಾನ ರಂಗದತ್ತ ಆಕರ್ಷಿತರಾದರು. ತಾರಾನಾಥ ಬಲ್ಯಾಯ ಮತ್ತು ದಿವಾಣ ಶಿವಶಂಕರ್ ಭಟ್ ಪ್ರಜ್ವಲ್ ಅವರ ಯಕ್ಷಗಾನ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ತೀರಾ :-
ಹಿರಿಯ ಕಲಾವಿದರಲ್ಲಿ ಪಾತ್ರದ ವಿವರ ಹಾಗೂ ವ್ಯಾಪ್ತಿ ಆಳವಾಗಿ ತಿಳಿದು, ಪಾತ್ರಕ್ಕೆ ಬೇಕಾಗುವುದನ್ನು ಹಿರಿಯ ಕಲಾವಿದರಲ್ಲಿ ಸಮಾಲೋಚಿಸಿ, ಪಾತ್ರದ ಸ್ವಭಾವವನ್ನು ಮನನ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಜ್ವಲ್.
ಎಲ್ಲಾ ಪುರಾಣ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು ಹಾಗೂ ಇವರು ಮಾಡಿದ ಎಲ್ಲಾ ವೇಷಗಳು ಇವರ ನೆಚ್ಚಿನ ವೇಷಗಳು ಎಂದು ಪ್ರಜ್ವಲ್ ಹೇಳುತ್ತಾರೆ.
ಯಕ್ಷಗಾನ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.
ಧರ್ಮಸ್ಥಳ ಮೇಳದಲ್ಲಿನ ಸೇವೆಯ ನಂತರ ಕಟೀಲು ಮೇಳ ಸೇರಿ ಒಂದು ವರ್ಷ ತಿರುಗಾಟ ನಡೆಸಿ, ಕುಂಟಾರು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿ, ನಂತರ ಎಡನೀರು ಮೇಳ, ಹೊಸನಗರ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಹನುಮಗಿರಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಮೇಳದ ಯಜಮಾನರಾದ ಟಿ. ಶಾಮ್ ಭಟ್, ಮೇಳದ ಸಹ ಕಲಾವಿದರ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪ್ರಜ್ವಲ್ ಕುಮಾರ್ ಗುರುವಾಯನಕೆರೆ.
ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರು ಮಮತಾ ಶೆಟ್ಟಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Anil S Karkera, Yakshaloka, Vinu Yedapadavu.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment