ಯಕ್ಷ ಸಾಧಕರು ೧೮೪
"ರಜತ ಯಕ್ಷಮಣಿ ವಸುಂಧರಾ ಹರೀಶ್ ಶೆಟ್ಟಿ".
ಯಕ್ಷಗಾನ ಗಂಡು ಮೆಟ್ಟಿನ ಕಲೆ ಎಂದು ಲಾಗಾಯ್ತಿನಿಂದಲೂ ಕರೆಸಿಕೊಂಡು ಮೆರೆದ ಕಮನೀಯ ಕಲೆ. ಇದರಲ್ಲಿ ಹೆಂಗಳೆಯರು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದಿದ್ದಾರೆ ಮತ್ತು ಯಕ್ಷ ಪ್ರಮೀಳೆಯರ ವಂಶವೂ ಬೆಳೆಯುತ್ತಲೇ ಇದೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಸರ್ವಾಂಗ ಸುಂದರವಾದ ಸಮಷ್ಟಿ ಕಲೆ ಯಕ್ಷಗಾನದ ಎಲ್ಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಅದು ಚೆಂಡೆ, ಮದ್ದಳೆಯಿರಲಿ, ನಾಟ್ಯ, ಗಾಯನವಿರಲಿ, ಅರ್ಥಗಾರಿಕೆಯೇ ಇರಲಿ; ಇಲ್ಲಿ ಮಹಿಳಾ ಸ್ವಾತಂತ್ರ್ಯವಿದೆ ಮತ್ತು ಪ್ರೋತ್ಸಾಹವೂ ಇದೆ. ಲಿಂಗ ಸಮಾನತೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಸಾಧಿಸಿದ ಕಲಾಪ್ರಕಾರ ಯಕ್ಷಗಾನವೆಂದರೂ ತಪ್ಪಲ್ಲ ಇಂತಹ ಶ್ರೀಮಂತ ಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಲಾವಿದೆ ಶ್ರೀಮತಿ ವಸುಂಧರಾ ಹರೀಶ್ ಶೆಟ್ಟಿ.
೨೮.೦೨.೧೯೮೫ ರಂದು ಅಪ್ಪಯ್ಯ ರೈ ಮುಚ್ಚಿರ್ಕವೆ ಹಾಗೂ ಸುಶೀಲಾ ಎ ರೈ (ನಿವೃತ್ತ ಮುಖ್ಯೋಪಾಧ್ಯಾಯಿನಿ) ದಂಪತಿಯರ ಮಗಳಾಗಿ ವಸುಂಧರಾ ಹರೀಶ್ ಶೆಟ್ಟಿ ಅವರ ಜನನ. MA, BED in English Literature ಇವರ ವಿದ್ಯಾಭ್ಯಾಸ. ಬಾಲ್ಯದಲ್ಲಿ ನೋಡಿದ ಯಕ್ಷಗಾನ ಬಯಲಾಟಗಳು ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ಯಕ್ಷಗಾನದ ಗುರುಗಳು:-
ಸಬ್ಬಣಕೋಡಿ ರಾಮ ಭಟ್ಟ, ಉಪ್ಪಳ ಕೃಷ್ಣ ಮಾಸ್ಟರ್, ಬಾಯಾರು ರಮೇಶ ಶೆಟ್ಟಿ, ಜಯರಾಮ ಪಾಟಾಳಿ ಪಡುಮಲೆ, ರಾಕೇಶ ರೈ ಅಡ್ಕ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳ ನಿರ್ದೇಶನದಂತೆ, ಭಾಗವತರೊಂದಿಗೆ, ಸಹ ಕಲಾವಿದರೊಂದಿಗೆ ಮಾತನಾಡಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ವಸುಂಧರಾ ಅವರು ಹೇಳುತ್ತಾರೆ.
ಮಾನಿಷಾದ ಇವರ ನೆಚ್ಚಿನ ಪ್ರಸಂಗ. ಎಲ್ಲಾ ತರಹದ
ಪುಂಡುವೇಷ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಬಹಳ ಉನ್ನತ ಮಟ್ಟದಲ್ಲಿ ಬೆಳೆಯುತ್ತಾ ಇದೆ. ಕೇವಲ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.
ಸನ್ಮಾನ ಹಾಗೂ ಪ್ರಶಸ್ತಿಗಳು:-
♦ರೋಟರಿ ಸಮುದಾಯ ದಳ ಕೊಲ್ಯ 'ರಜತ ಯಕ್ಷಮಣಿ' ಎಂಬ ಬಿರುದು ನೀಡಿ ಸನ್ಮಾನ.
♦ ಅಬ್ಬಕ್ಕ ಟೀವಿ ಪುರಸ್ಕಾರ.
♦ ಅಜೆಕಾರು ಬಳಗದ ಸನ್ಮಾನ.
♦ ರೋಟರಿ ಕ್ಲಬ್ ಮಂಗಳೂರು ಪೂರ್ವ.
♦ ಯಕ್ಷಾರಾಧನಾ ಕಲಾಕೇಂದ್ರ ಸನ್ಮಾನ.
♦ ಯಕ್ಷಾದರ್ಶ ದಂಪತಿ ಸನ್ಮಾನ.
♦ ಬಂಟರ ಸಂಘ ಉಳ್ಳಾಲ ವಲಯ.
♦ ಶ್ರೀಕೃಷ್ಣ ಜನ್ಮಾಷ್ಟಮಿ ಬಳಗ ನಾಯ್ಕಾಪು ಮೊದಲಾದೆಡೆ ಸನ್ಮಾನಗಳು ಇವರಿಗೆ ಸಿಕ್ಕಿರುತ್ತದೆ.
ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ, ಯಕ್ಷ ತೇಜಸ್ವಿ ಬಳಗ ಅಡ್ಕ, ಸನಾತನ ಯಕ್ಷಾಲಯ ಬಳಗ ಅಡ್ಕ, ಯಕ್ಷರಾಧನ ಕಲಾಕೇಂದ್ರ ಉರ್ವ ಮುಂತಾದ ಕಲಾ ತಂಡದಲ್ಲಿ ತಿರುಗಾಟವನ್ನು ಮಾಡಿರುತ್ತಾರೆ.
ವಸುಂಧರಾ ಹರೀಶ್ ಶೆಟ್ಟಿ ಅವರು ೨೮.೦೫.೨೦೦೯ ರಂದು ಹರೀಶ್ ಶೆಟ್ಟಿ ಇವರನ್ನು ಮದುವೆಯಾಗಿ ಮಗಳು ನಿಸ್ವನ ೧೦ವರ್ಷ, ಮಗ ನಿನಾದ ೧.೫ ವರ್ಷ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment