ಯಕ್ಷ ಸಾಧಕರು 213
"ಕ್ರಿಯಾಶೀಲ ಯಕ್ಷಪಟು"
ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ "ಯಕ್ಷಗಾನ". ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಶಿವರಾಜ ಬಜಕೂಡ್ಲು.
ಶ್ರೀಯುತ ಮೋಹನ ಹಾಗೂ ಸುಗಂಧಿ ಇವರ ಮಗನಾಗಿ 7.12.1997 ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್.ಎನ್.ಎಚ್.ಎಸ್ ಪೆರ್ಲ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿರುತ್ತಾರೆ. ಯಕ್ಷಗಾನ ಕಲಿಯುವುದಕ್ಕೆ ಮೂಲ ಪ್ರೇರಣೆ ತಾಯಿ. ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ ಪೆರ್ಲ, (ವಿಶ್ವೇಶತೀರ್ಥ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಶ್ರೀ ಸಬ್ಬಣಕೋಡಿ ರಾಮ ಭಟ್ಟ ಇವರ ಯಕ್ಷಗಾನ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-
ಮೇಳದ ಹಿರಿಯ ಕಲಾವಿದರಲ್ಲಿ ಕೇಳಿ ಮತ್ತು ಭಾಗವತರಲ್ಲಿ ಕೇಳಿ ಸಿದ್ಧತೆಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶಿವರಾಜ.
ಅಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ರಕ್ತರಾತ್ರಿ, ಸುದರ್ಶನ ವಿಜಯ, ತರಣಿಸೇನ ಕಾಳಗ, ಬಬ್ರುವಾಹನ ಕಾಳಗ, ಶ್ರೀನಿವಾಸ ಕಲ್ಯಾಣ ನೆಚ್ಚಿನ ಪ್ರಸಂಗಗಳು.
ಅಭಿಮನ್ಯು, ಲಕ್ಷ್ಮಣ, ಅಶ್ವತ್ಥಾಮ, ಸುದರ್ಶನ, ಪರಶುರಾಮ ಇತ್ಯಾದಿ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಈಗಿನ ಯಕ್ಷಗಾನ ಕಾಲಮಿತಿಯಿಂದಲಾಗಿ ವೇಗವನ್ನು ಪಡೆದುಕೊಂಡಿದೆ ಮತ್ತು ಹೊಸ ಹೊಸ ಆವಿಷ್ಕಾರಗಳಿಗೆ ತನ್ನನ್ನು ತಾನು ಒಗ್ಗಿಕೊಳ್ಳುತ್ತಾ ಸಾಗುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಕಾಲಮಿತಿಗೆ ಒಗ್ಗಿಕೊಂಡಿರುವ ಇಂದಿನ ಪ್ರೇಕ್ಷಕ ಅಲ್ಪ ಅವಧಿಯಲ್ಲಿ ಇಡೀ ಪ್ರಸಂಗವನ್ನು ಕಣ್ತುಂಬಿಕೊಳ್ಳಲು ಉತ್ಸುಕನಾಗಿದ್ದಾನೆ ಮತ್ತು ಯಕ್ಷಗಾನೀಯವಾದ ಹೊಸ ಬೆಳವಣಿಗೆಗಳಿಗೆ ಸಹಕಾರಿಯಾಗಿದ್ದಾನೆ.
ಯಕ್ಷರಂಗದಲ್ಲಿ ಮುಂದಿನ ಯೋಜನೆ:-
ನಾಟ್ಯ, ಅಭಿನಯ ಮತ್ತು ಅರ್ಥಗಾರಿಕೆಯ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಹಂಬಲವಿದೆ ಹಾಗೂ ಅದಕ್ಕಾಗಿ ಪ್ರಯತ್ನಶೀಲನಾಗಿದ್ದೇನೆ ಮತ್ತು ನನಗೆ ಸಿಗುವ ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ತಲುಪಿಸಬೇಕೆಂಬ ಬಯಕೆಯಿದೆ.
ಎಡನೀರು ಮೇಳ, ಕಟೀಲು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಹನುಮಗಿರಿ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
Comments
Post a Comment