ಯಕ್ಷ ಸಾಧಕರು 239
“ಯಕ್ಷ ಟೀಚರ್"
ಯಕ್ಷಗಾನ ಗಂಡು ಕಲೆಯೆಂದೇ ಪ್ರತೀತಿ. ಆದರೆ ಇತ್ತೀಚಿಗೆ ಹೆಂಗೆಳೆಯರೂ ರಂಗಸ್ಥಳದಲ್ಲಿ ರಾರಾಜಿಸುತ್ತಿದ್ದಾರೆ. ಅಂಥಹ ಕಲಾವಿದರಲ್ಲಿ ಪ್ರಿಯಾಂಕ ಕೆ ಮೋಹನ ಕೂಡಾ ಒಬ್ಬರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಸಾಫ್ಟ್ ವೇರ್ ಉದ್ಯೋಗಿಯಾಗಿ ಯಕ್ಷಗಾನವನ್ನು ಅರಾಧಿಸಿದ ರೀತಿ ಅನನ್ಯ.
3.11.1988ರಂದು ಮೋಹನ್ ಹೊಳ್ಳ ಹಾಗೂ ವೀಣಾ ಮೋಹನ್ ಇವರ ಮಗಳಾಗಿ ಜನನ. B.E Electronics ಇವರ ವಿದ್ಯಾಭ್ಯಾಸ. ತಂದೆ ಮೋಹನ್ ಹೊಳ್ಳ, ಕೃಷ್ಣಮೂರ್ತಿ ತುಂಗಾ ಹಾಗೂ ಸುದರ್ಶನ್ ಉರಾಳ ಇವರ ಯಕ್ಷಗಾನ ಗುರುಗಳು. ಮನೆಯ ವಾತಾವರಣ ಹಾಗೂ ತಂದೆ ಕಟ್ಟಿದ ‘ಯಕ್ಷ ದೇಗುಲ’ ಸಂಸ್ಥೆ ಪ್ರಿಯಂಕಾರವರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು.
ಪ್ರಸಂಗದ ಪದ್ಯ, ಸಾಹಿತ್ಯ ಹಾಗೂ ವಿಡಿಯೋ ಹಾಗೂ ಗುರುಗಳ ಬಳಿ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಿಯಾಂಕ. ಪೌರಾಣಿಕ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು. ಸುಭದ್ರೆ, ದ್ರೋಣ, ಧರ್ಮರಾಯ, ಕೃಷ್ಣ, ಭದ್ರಸೇನೆ, ಸುಧನ್ವ, ಅರ್ಜುನ ಇತ್ಯಾದಿ ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿದೆ. ಆದರೆ ಬೇಸರವಿದೆ, ಅವಕಾಶಗಳು ವಿಪುಲವಾಗಿದ್ದರೂ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಬಹಳ ಬೇಸರವಿದೆ. ಎಲ್ಲಿಯವರೆಗೆ ರಸಿಕತೆ ಕಲಾರಸಿಕರಲ್ಲಿ ಇರುತ್ತದೆಯೊ ಅಲ್ಲಿಯವರೆಗೆ ಕಲೆ ಶ್ರೀಮಂತವಾಗಿ ಹಾಗೂ ಕಲಾವಿದರು ಜೀವಂತವಾಗಿ ಇರುತ್ತಾರೆ.
ಇತ್ತೀಚಿನ ಜನಮಾನಸದಲ್ಲಿ ಹಾಗೂ ಯುವಕರಲ್ಲಿ ಕಲೆಯ ಮೇಲಿನ ಪ್ರೀತಿ ಹಾಗೂ ಆಸೆ ಬೆಳೆಯುತ್ತಿರುವುದು ಮೆಚ್ಚುವಂತಹ ವಿಚಾರ. ಈ ಪ್ರೀತಿ ಹಾಗೂ ಅಭಿಮಾನ ಯಕ್ಷಗಾನ ಪ್ರಾಕಾರದ ಮೇಲೆ ಇನ್ನಷ್ಟು ಬೆಳೆಯಲಿ ಎಂಬುದು ನನ್ನ ಕೋರಿಕೆ.
ಬೆಂಗಳೂರು, ಮೈಸೂರು, ಉಡುಪಿ, ಬಳ್ಳಾರಿ, ತುಮಕೂರು ಹಾಗೂ ನಾನಾ ಕಡೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಪಾತ್ರವಾಗಿ ಮೆರೆದು ಕಲಾಭಿಮಾನಿಗಳ ಹಾರ್ದಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
“Art In Education" ಎಂಬ ಒಂದು ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನ ಹಾಗೂ ಇತರ ಕಲಾ ಪ್ರಕಾರವನ್ನು ಹೇಳಿ ಕೊಡುವ ಒಂದು ಯೋಜನೆ ಇದೆ ಎಂದು ಹೇಳುತ್ತಾರೆ ಪ್ರಿಯಾಂಕ.
ಅಪ್ಪ ಹಾಗೂ ಅಮ್ಮ, ಪತಿ ಗಿರೀಶ್, ತಂಗಿ ಪ್ರೀತಿ ಕೆ ಮೋಹನ್ ಇವರ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರಿಯಾಂಕ.
ಪ್ರಿಯಾಂಕ ಕೆ ಮೋಹನ ಅವರು ಗಿರೀಶ್ ಇವರನ್ನು 22.04.2015ರಂದು ಮದುವೆಯಾಗಿ ಮಗಳು ಶಾರ್ವಿ ಪ್ರಿಯಾಂಕ ಗಿರೀಶ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8971275651
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈
Comments
Post a Comment