ಯಕ್ಷ ಸಾಧಕರು 265

"ಪ್ರತಿಭಾಪೂರ್ಣ ಯಕ್ಷಸಿರಿ"

ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ ಯಕ್ಷಗಾನ. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಜಾಗನಳ್ಳಿ ನಿರಂಜನ.




ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾಗನಳ್ಳಿಯ ಶ್ರೀಯುತ ವೆಂಕಟ್ರಮಣ ಹೆಗಡೆ ಹಾಗೂ ಶ್ರೀಮತಿ ಸರಸ್ವತಿ ಹೆಗಡೆ ಇವರ ಮಗನಾಗಿ 23.03.1989ರಂದು ಜನನ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ (E&C) ಇವರ ವಿದ್ಯಾಭ್ಯಾಸ. ಭಾಗವತರು - ಅರ್ಥಧಾರಿಗಳು - ತಾಳಮದ್ದಲೆ ಕೂಟವೇ ಇದ್ದ ಜಾಗನಳ್ಳಿ ಕುಟುಂಬದಲ್ಲಿ ಜನನ.. ಯಕ್ಷಗಾನ ರಕ್ತಗತವಾಗಿ ಬಂದ ಕಲೆಯಾದುದರಿಂದ ಮತ್ತು ಬಾಲ್ಯದಲ್ಲಿಯೇ ಯಕ್ಷಗಾನದ ಮೇಲಿದ್ದ ಆಸಕ್ತಿ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಶ್ರೀಯುತ ಪರಮೇಶ್ವರ ಹೆಗಡೆ ಐನಬೈಲು ಇವರ ಯಕ್ಷಗಾನ ಗುರುಗಳು.

ಪ್ರಸಂಗದ ಕಾಲ, ಪಾತ್ರದ ಸ್ವಭಾವವನ್ನು ಕಲ್ಪನೆಯಲ್ಲಿರಿಸಿಕೊಂಡು ಅದಕ್ಕೆ ಬೇಕಾದ ವಿಷಯ ಸಾಹಿತ್ಯ ಸಂಗ್ರಹ. ತಕ್ಷಣಕ್ಕಾದರೆ ಪದ್ಯದ ಭಾವಕ್ಕನುಸಾರವಾಗಿ ಅರ್ಥವಿಸ್ತಾರ. ಪ್ರಸಂಗದ ಉದ್ದೇಶಕ್ಕನುಗುಣವಾಗಿ ಹಾಗೂ ಎದುರಿನ ಪಾತ್ರಗಳ ಪದ್ಯಗಳಿಗೆ ಒದಗಬೇಕಾದ ಸಂಭಾಷಣೆ, ಪ್ರಸಂಗದ ಸಮಾರೋಪದ ವಿಷಯ ಹಾಗೂ ಪಾತ್ರದ ಸ್ವಭಾವ - ವಯಸ್ಸು- ಪ್ರಸಂಗದಲ್ಲಿ ಪಾತ್ರದ ಪ್ರಾಧಾನ್ಯತೆ ನೋಡಿಕೊಂಡು ವೇಷಗಾರಿಕೆಯ ಸಿದ್ಧತೆಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಜಾಗನಳ್ಳಿ ನಿರಂಜನ.

ಸುಧನ್ವಾರ್ಜುನ, ವಾಲಿಮೋಕ್ಷ, ಕೃಷ್ಣಾರ್ಜುನ, ಶರಸೇತುಬಂಧ, ಸುಭದ್ರಾ ಕಲ್ಯಾಣ, ಭರತಾಗಮನ,  ರಾಮನಿರ್ಯಾಣ, ಸುದರ್ಶನ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಅರ್ಜುನ, ಕೃಷ್ಣ, ಸುಧನ್ವ, ಬಲರಾಮ, ವಾಲಿ-ಸುಗ್ರೀವ, ಲಕ್ಷ್ಮಣ, ಭರತ, ಶತ್ರುಘ್ನ, ರಾಮ, ಭರತಚಕ್ರೇಶ್ವರ, ಸುದರ್ಶನ, ವಿಷ್ಣು, ಮದನ ಇತ್ಯಾದಿ ನೆಚ್ಚಿನ ವೇಷಗಳು.




ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಲಾಕ್ಡೌನ್ ಸಡಿಲಿಕೆ ನಂತರ ಆಟ - ತಾಳಮದ್ದಲೆಗಳ ಸಂಖ್ಯೆ, ಯಕ್ಷಗಾನ ಕಲಿಯುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಸಂತೋಷ. ಆದರೂ ಸಮಯಮಿತಿಯ ಕಾರಣದಿಂದ - ಅನಿವಾರ್ಯವಾಗಿ ಕಡಿಮೆಯಾದ ಪದ್ಯಗಳು - ಸನ್ನಿವೇಷಗಳು - ಪಾತ್ರಗಳು, ಪಾತ್ರದ ಭಾವಚಿತ್ರಣಕ್ಕೆ ಬೇಕಾದ ಸಮಯಾವಕಾಶ (ಸ್ಪೇಸ್) ಪೂರ್ಣಪ್ರಮಾಣದಲ್ಲಿ ಸಿಗದಿರುವಿಕೆ, ಕೆಲವೇ ಕೆಲವು ಪಾತ್ರಗಳ ಹೈಲೈಟ್. ಕಲಾವಿದ ಕಾಣಿಸಿಕೊಳ್ಳಬೇಕಾದರೆ ಪದ್ಯ-ಸನ್ನಿವೇಷದ ಭಾವಕ್ಕಿಂತ ಕುಣಿತಕ್ಕೇ ಹಾಗೂ ಹಾಸ್ಯ ಸಂಭಾಷಣೆಗೆ (ಗಮ್ಮತ್ತಿಗೆ) ಮೊರೆ ಹೋಗಬೇಕಾದ ಸ್ಥಿತಿ.
ಮಾತಾಡುವವನಿಗೆ/ಸಂಭಾಷಣೆಗೆ ಒದಗುವವನಿಗೆ ಪೋಷಕಪಾತ್ರ - ಕುಣಿಯುವವನಿಗೆ ಪ್ರಧಾನ ಪಾತ್ರ ಕಟ್ಟಿಟ್ಟ ಬುತ್ತಿಯಾದದ್ದಕ್ಕೆ ಬೇಸರ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಆಟ ನೋಡುವ ದೃಷ್ಟಿ - ಸಹನೆ, ಪ್ರೇಕ್ಷಕರ ಸ್ವಭಾವ - ಕಲೆಯ ಮೇಲಿನ ಭಕ್ತಿ - ಅಭಿಮಾನ - ಹವ್ಯಾಸ - ಅವರಿಗಿರುವ ಸಮಯಾವಕಾಶಕ್ಕೆ ಬಿಟ್ಟಿದ್ದು.  ರಾತ್ರಿ ಬೆಳಗಾಗುವವರೆಗೆ ಆಟ ನೋಡುವವರ ಸಂಖ್ಯೆ ವಿರಳ,
ಒಬ್ಬ (ಹಿಮ್ಮೇಳ / ಮುಮ್ಮೇಳದ) ಕಲಾವಿದ ಸಮರ್ಥನಾಗಿದ್ದರೂ ವೃತ್ತಿಮೇಳ/ಟೆಂಟ್ ಮೇಳದಲ್ಲಿಲ್ಲ ಎಂಬ ಕಾರಣಕ್ಕಾಗಿ ಹಾಗೂ ಯಾರೋ ಒಬ್ಬರಂತೆ ಪಾತ್ರ/ವೇಷ/ಸಂಭಾಷಣೆ ಮಾಡಲಿಲ್ಲ - ಪದ್ಯ ಹೇಳಲಿಲ್ಲ ಎಂಬ ಕಾರಣಕ್ಕಾಗಿ ಪ್ರೇಕ್ಷಕರು ಅವನನ್ನು ನಿರ್ಲಕ್ಷಿಸುವುದು/ ಗುರುತಿಸದಿರುವುದೇ ಹೆಚ್ಚು.

2003ರಿಂದ ಹವ್ಯಾಸಿಯಾಗಿದ್ದಾಗ ಕೋಳಿಗಾರ-ಬೇಡಕಣಿ-ಹೆಗ್ಗರಣಿ ಮೇಳಗಳಲ್ಲಿ (ಹೈಸ್ಕೂಲ್/ಕಾಲೇಜ್ 2-3 ತಿಂಗಳ ರಜೆಯಲ್ಲಿ), ವಿವಿಧ ಸಂಘಟನೆಗಳ ಆಟಗಳಲ್ಲಿ, 2016ರಿಂದ ವೃತ್ತಿಯಾಗಿಸಿಕೊಂಡ ಮೇಲೆ 7 ವರ್ಷ ಗುಂಡಬಾಳ ಮೇಳ, 1 ವರ್ಷ ಜಲವಳ್ಳಿ ಮೇಳ ಪ್ರಸ್ತುತ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.







ಯಕ್ಷಗಾನ ವೇಷಭೂಷಣ ತಯಾರಿಕೆ, ತಾಳಮದ್ದಲೆ, ಸಿಕ್ಕಿದ್ದನ್ನು ಓದುವುದು, ಪ್ರವಾಸ, ಚೆಸ್ ಇವರ ಹವ್ಯಾಸಗಳು.

ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಜಾಗನಳ್ಳಿ ನಿರಂಜನ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705

ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.
💐🎉🎊🎈

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395