ಯಕ್ಷ ಸಾಧಕರು 270
"ಯಕ್ಷ ಪವನ"
ಕಲಾ ಪ್ರಪಂಚವು ಮುತ್ತಿನ ಕಿರೀಟದಲ್ಲಿ ಹೊಳೆವ ರತ್ನಮಣಿಯಂತೆ ಕಂಗೊಳಿಸುವ ಅನೇಕ ಅದ್ಭುತ ಪ್ರತಿಭೆಗಳನ್ನು ಕಲಾಜಗತ್ತಿಗೆ ಪರಿಚಯಿಸಿದೆ... ಇಂತಹ ಅದ್ಭುತ ಕಲಾಮಾಣಿಕ್ಯಗಳಲ್ಲಿ ಕೆಲವರು ಪ್ರಜ್ವಲಿಪ ದೀಪದಂತೆ ಜಗತ್ತಿಗೆ ಕಂಡರೆ ಮತ್ತೆ ಕೆಲ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಉಳಿದುಕೊಂಡಿದ್ದಾರೆ. ಅಂತಹ ಅದ್ಭುತ ಪ್ರತಿಭೆಗಳಲ್ಲಿ ಪ್ರಸ್ತುತ ನಮಗೆ ರತ್ನದಂತೆ ಹೊಳೆವ ಪ್ರತಿಭೆ ಪವನ ಕುಮಾರ ಗಣಪತಿ ಹೆಗಡೆ.
24.09.2004ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಹೊಸಾಕುಳಿಯ ಸಾಣ್ಮನೆಯ ಗಣಪತಿ ಹೆಗಡೆ ಹಾಗೂ ಸರಸ್ವತಿ ಹೆಗಡೆ ಇವರ ಮಗನಾಗಿ ಜನನ. ಉಮೇಶ ಭಟ್ ಬಾಡ ಇವರ ಯಕ್ಷಗಾನ ಗುರುಗಳು.
ಬ್ರಹ್ಮಕಪಾಲ, ಲಂಕಾದಹನ, ಲವ ಕುಶ, ಸುಧನ್ವಾರ್ಜುನ, ಬಬ್ರುವಾಹನ ಇವರ ನೆಚ್ಚಿನ ಪ್ರಸಂಗಗಳು.
ಹನುಮಂತ, ಮನ್ಮಥ, ಅಶ್ವತ್ಥಾಮ, ಬಬ್ರುವಾಹನ, ಸುಧನ್ವ, ಸುಂದರ ರಾವಣ ಇವರ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು, ದಿನದ ಪ್ರಸಂಗದ ಬಗ್ಗೆ ಚಿಂತನೆ ಮಾಡಿಕೊಂಡು ಹಾಗೂ ಹಿರಿಯ ಕಲಾವಿದರ ಹತ್ತಿರ ಕೇಳಿ ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಪವನ ಕುಮಾರ ಅವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಪೂರ್ಣ ರಾತ್ರಿ ನಡೆಯುತ್ತಿದ್ದ ಹೆಚ್ಚಿನ ಪ್ರಸಂಗಗಳು ಕಾಲಮಿತಿಗೆ ಒಳಪಟ್ಟಿರುವುದು ದೊಡ್ಡ ಬದಲಾವಣೆ ಎನಿಸುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಶಾಸ್ತ್ರೀಯ ಕಲಾ ಚೌಕಟ್ಟಿನ ಬಗ್ಗೆ ಇನ್ನೂ ಅಲ್ಲಿಲ್ಲಿ ಒತ್ತಾಯವಿದ್ದರೂ ಸಾಮಾನ್ಯ ಪ್ರೇಕ್ಷಕರ ಅಭಿರುಚಿ ಬದಲಾವಣೆಯಾಗಿದೆ ಎನ್ನಬಹುದು. ಅದೇ ಕಾಲಮಿತಿ ಮುಂತಾದ ಪರಿವರ್ತನೆಗೆ ಮೂಲ.
ಯಕ್ಷಗಾನ ಪರಂಪರೆಯ ಶುದ್ಧತೆಯನ್ನು ಉಳಿಸಿ ಬೆಳೆಸುವುದು, ರಂಗದಲ್ಲಿ ಅನೇಕ ರೀತಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವುದು ಮುಂದಿನ ಯೋಜನೆ ಎಂದು ಪವನ ಕುಮಾರ ಅವರು ಹೇಳುತ್ತಾರೆ.
ಪ್ರೇಕ್ಷಕರ ಕರತಾಡನವೇ ನನಗೆ ದೊಡ್ಡ ಸನ್ಮಾನ ಹಾಗೂ ಪ್ರಶಸ್ತಿ.
ಬಂಗಾರಮಕ್ಕಿ, ನೀಲಾವರ, ಅಲಸೆ, ಶನೀಶ್ವರ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪವನ ಕುಮಾರ ಗಣಪತಿ ಹೆಗಡೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎️ :- +91 8317463705
Comments
Post a Comment