ಯಕ್ಷ ಸಾಧಕರು 308
"ರಸಗಾನ ಸಿಂಚನ"
ಯಕ್ಷರಂಗಕ್ಕೆ ಮುಮ್ಮೇಳದ ಕಲಾವಿದರಾಗಿ ಬಂದು ನಂತರದ ದಿನಗಳಲ್ಲಿ ಆಕಸ್ಮಿಕವಾಗಿ ಹಿಮ್ಮೇಳದ ಕಡೆಗೆ ಆಸಕ್ತಿ ಮೂಡಿ ಇಂದು ಯಕ್ಷಗಾನ ರಂಗದಲ್ಲಿ ಭಾಗವತಿಕೆಯಲ್ಲಿ ಭರವಸೆ ಮೂಡಿಸುತ್ತಿರುವ ಯುವ ಪ್ರತಿಭೆ ಸಿಂಚನಾ ಮೂಡುಕೋಡಿ.
ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಮೂಡುಕೋಡಿಯ ಸತೀಶ್ ನಾಯ್ಕ ಹಾಗೂ ಚಂದ್ರಾವತಿ ಅವರ ಮಗಳಾಗಿ 9.೦9.2006ರಂದು ಜನನ. ಪ್ರಸ್ತುತ ಪ್ರಥಮ ಬಿ.ಕಾಂ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಮೋಹನ ಬೈಪಾಡಿತ್ತಾಯ ಕಡಬ ಇವರ ಯಕ್ಷಗಾನ ಗುರುಗಳು.
ಅಜ್ಜ ದಿ||ಧರ್ಣಪ್ಪ ನಾಯ್ಕ ಬೆಳಾಲು ಇವರು ಯಕ್ಷಗಾನ ರಂಗದಲ್ಲಿ ಸುಮಾರು 30 ವರ್ಷದ ಕಾಲ ಸೇವೆ ಸಲ್ಲಿಸಿದ್ದು ನನ್ನಲ್ಲಿ ಯಕ್ಷಗಾನ ಆಸಕ್ತಿ ಮೂಡಲು ಅದೇ ಪ್ರೇರಣೆ ಎಂದು ಭಾವಿಸುತ್ತೇನೆ. ಯಕ್ಷರಂಗಕ್ಕೆ ಮುಮ್ಮೇಳದ ಮೂಲಕವೇ ಬಂದದ್ದು. ಆಕಸ್ಮಿಕವಾಗಿ ಹಿಮ್ಮೇಳದ ಕಡೆಗೆ ಆಸಕ್ತಿ ಮೂಡಿರುವುದು, ಇನ್ನು ಭಾಗವತಿಕೆಯನ್ನೇ ಮುಂದುವರಿಸುವ ಯೋಚನೆ ಎಂದು ಹೇಳುತ್ತಾರೆ ಸಿಂಚನಾ.
ಸುಧನ್ವ ಕಾಳಗ, ಕದಂಬ ಕೌಶಿಕೆ, ಕುಮಾರ ವಿಜಯ, ದಕ್ಷ ಯಜ್ಞ, ಶ್ರೀ ರಾಮ ಪಟ್ಟಾಭಿಷೇಕ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಶುದ್ಧ ಸಾವೇರಿ, ಸಿಂಧು ಭೈರವಿ, ಮೋಹನ, ಮಧ್ಯಮಾವತಿ, ಕಲ್ಯಾಣಿ, ಶಿವರಂಜಿನಿ ಇತ್ಯಾದಿ ಇವರ ನೆಚ್ಚಿನ ರಾಗಗಳು.
ಬಲಿಪ ನಾರಾಯಣ ಭಾಗವತರು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಇವರ ನೆಚ್ಚಿನ ಭಾಗವತರು.
ಭಾಗವತರ ಹಾಡಿಗೆ ಹೊಂದಾಣಿಕೆಯಲ್ಲಿ ಬಾರಿಸುವ ಎಲ್ಲಾ ಚೆಂಡೆ ಹಾಗೂ ಮದ್ದಳೆವಾದಕರು ನೆಚ್ಚಿನವರು ಎಂದು ಹೇಳುತ್ತಾರೆ ಸಿಂಚನಾ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದಲ್ಲಿ ಈಗ ಅನೇಕ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇದು ಯಕ್ಷಗಾನವನ್ನು ಉಳಿಸುವಲ್ಲಿ ಒಳ್ಳೆಯ ಮಾರ್ಗವಾದೀತು ಎಂಬುದು ಅಭಿಪ್ರಾಯ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರಿಂದಲೇ ಓರ್ವ ಕಲಾವಿದ. ಕಲಾವಿದನ ಸಾಧನೆಯಲ್ಲಿ ಪ್ರೇಕ್ಷಕರ ಪ್ರೀತಿ, ಅಭಿಮಾನ, ಪ್ರೋತ್ಸಾಹ ಮುಖ್ಯ ಪಾತ್ರ ವಹಿಸುತ್ತದೆ. ಈಗಿನ ಜೀವನ ಶೈಲಿಯಲ್ಲಿ ಸಮಯದ ಅಭಾವವಿದ್ದರು ಯಕ್ಷಗಾನಕ್ಕೆ ದೊರಕ ಬೇಕಾದ ಪ್ರೇಕ್ಷಕ ವರ್ಗ ಸಿಕ್ಕೆ ಸಿಗುತ್ತದೆ. ಅದು ಯಕ್ಷಗಾನ ಕಲೆಯ ಶಕ್ತಿಯಾಗಿದೆ.
ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಕಲಿಕೆ ಎಂಬುದು ಪಯಣವಾಗಿದೆ. ಯಕ್ಷಗಾನ ಎಂಬುದು ಸಾಗರದಷ್ಟು ಆಳವಾಗಿರುವುದರಿಂದ ಇನ್ನು ಬಹಳಷ್ಟು ವಿಷಯವನ್ನು ಕಲಿಯುವುದರ ಜೊತೆಗೆ ಯಕ್ಷಗಾನ ಕಲಾ ಸೇವೆಯನ್ನು ಮಾಡಲು ಇಚ್ಛಿಸುತ್ತೇನೆ.
ಧರ್ಮಸ್ಥಳ, ಕಟೀಲು, ಪಾವಂಜೆ, ಸೂಡ, ನಾಳ ಮೇಳಗಳಲ್ಲಿ ಸೇವೆ ಮಾಡಲು ಅವಕಾಶ ದೊರಕಿದೆ ಹಾಗೂ ಕಳೆದ 5 ವರ್ಷದಿಂದ ಯಕ್ಷಗಾನದ ಅಭ್ಯಾಸ ಮಾಡುತ್ತಿದ್ದೇನೆ.
ಪುಸ್ತಕ ಓದುವುದು, ಹಾಡುವುದು ಹವ್ಯಾಸಗಳು.
ತಂದೆ, ತಾಯಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸಿಂಚನಾ ಮೂಡುಕೋಡಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
☎️ :- +918317463705
Comments
Post a Comment