ಯಕ್ಷ ಸಾಧಕರು 346

"ಪ್ರತಿಭಾನ್ವಿತ ಕಲಾವಿದ"

ವೃತ್ತಿಯಲ್ಲಿ ಇವರು ಕುಂದಾಪುರ ಎಕ್ಸಲೆಂಟ್ ಕಾಲೇಜಿನಲ್ಲಿ ಕನ್ನಡ  ಪ್ರಾಧ್ಯಾಪಕರು, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಮಿಂಚುತ್ತಿರುವ ಕಲಾವಿದ ಗುರುಪ್ರಸಾದ್.



14.04.1985 ರಂದು ದಿ.ಪದ್ಮನಾಭ ಹಾಗೂ ಪಾರ್ವತಿ ದಂಪತಿಯ ಮಗನಾಗಿ ಜನನ. BA, B.Ed, MA ಹಾಗೂ TET Qualified ಇವರ ವಿದ್ಯಾಭ್ಯಾಸ. ದಿ. ಸುಬ್ರಾಯ ಮಲ್ಯ ಹಾಗೂ ಬೆಳ್ವೆ ಗಣೇಶ್ ಶೆಟ್ಟಿ ಅವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದು, ಯಕ್ಷಗಾನವನ್ನು ನೋಡಿ ಕಲಿತು ಇಂದು ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವ ಕಲಾವಿದರು ಗುರುಪ್ರಸಾದ್.
ಹವ್ಯಾಸಿ ಕಲಾವಿದನಾಗಿ ಮಂದಾರ್ತಿ, ಗೋಳಿಗರಡಿ, ಹಟ್ಟಿಯಂಗಡಿ, ಹಾಲಾಡಿ ಮೇಳ ಹಾಗೂ ಹಲವಾರು ಹವ್ಯಾಸಿ ಯಕ್ಷಗಾನ ತಂಡದಲ್ಲಿ ತಿರುಗಾಟ ಮಾಡಿದ ಅನುಭವ.

ತಮ್ಮ ಬಿಡುವಿನ ಸಮಯದಲ್ಲಿ ಪ್ರಸಾದ ಕುಮಾರ್ ಮೊಗೆಬೆಟ್ಟು ಹಾಗೂ ಮಂದಾರ್ತಿ ಮಹೇಶ್ ಕುಮಾರ್ ರವರಿಂದ ತರಬೇತಿ ಪಡೆದುಕೊಳ್ಳುತ್ತಾರೆ.
ಪುರಾಣದ ಎಲ್ಲಾ ಪ್ರಸಂಗಗಳು ಹಾಗೂ ಐತಿಹಾಸಿಕ ಪ್ರಸಂಗ "ರಂಗನಾಯಕಿ" ಇವರ ನೆಚ್ಚಿನ ಪ್ರಸಂಗಗಳು.
ನೆಚ್ಚಿನ ವೇಷಗಳು:-
ದ್ರೌಪದಿ, ತಾರಾವಳಿ, ಕೃಷ್ಣ, ಬಲರಾಮ, ರಾಮ, ಮೈಂದ, ಲಕ್ಷ್ಮೀ, ಶ್ರೀ ದೇವಿ, ವಿಷ್ಣು, ಬ್ರಹ್ಮ, ಪರುಶುರಾಮ, ರಕ್ತಬೀಜ, ಅಯ್ಯಪ್ಪ, ವಾವರ, ಭದ್ರ, ಬನಶಂಕರಿ, ಅಭಿಮನ್ಯು, ದ್ರೋಣ, ಅರ್ಜುನ, ರುಕ್ಮಾಂಗ, ಶುಭಾಂಗ, ಪುಷ್ಕಳ, ಶತ್ರುಘ್ನ, ನಾಗಶ್ರೀ, ಅಕ್ಷಯ ಕುಮಾರ ಇತ್ಯಾದಿ.





ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಆ ದಿನದ ಪ್ರಸಂಗ ಯಾವ ಪುರಾಣ ಕಥೆಗೆ ಸಂಬಂಧ ಎಂದು ತಿಳಿದು ಅದರ ಕಥೆ ಏನು, ಆ ಪ್ರಸಂಗದಲ್ಲಿ ಪಾತ್ರದ ಚೌಕಟ್ಟು, ಪಾತ್ರಕ್ಕೆ ಜೀವ ನೀಡಿದ ಹಿರಿಯ ಕಲಾವಿದರ ಸಂಭಾಷಣೆ ಹೇಗೆ, ತಾಳಮದ್ದಲೆ ಆ ಪ್ರಸಂಗದ ಸಂಭಾಷಣೆ ಹೇಗೆ ಮೂಡಿ ಬಂದಿದೆ ಹಾಗೂ ನನ್ನ ಎದುರು ಪಾತ್ರಧಾರಿ ಹೇಗೆ ಎಂದು ಅರಿತು ಅದಕ್ಕೆ ತಕ್ಕ ಯೋಜನೆ ರೂಪಿಸಿ ಸಿದ್ದ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ.

ಯಕ್ಷಗಾನ ಇಂದಿನ ಸ್ಥಿತಿ ಗತಿ:-
ಯಕ್ಷಗಾನಕ್ಕೆ ಹಿಂದೆ ಇದ್ದಷ್ಟು ಮಾನ್ಯತೆ ಇಲ್ಲ. ಆಗ ಎಷ್ಟೋ ದೂರ ನಡೆದುಕೊಂಡು ಹೋಗಿ ಪ್ರದರ್ಶನ ನೋಡುವ ಕುತೂಹಲವಿತ್ತು. ಈಗ ಕಲಾವಿದರಿಗೂ ಕಲಿಯುವ ಆಸಕ್ತಿ ಕಡಿಮೆ. ಬಾಲ ಗೋಪಾಲ, ಪೀಠಿಕೆ ಸ್ತ್ರೀ ವೇಷ, ಒಡ್ಡೋಲಗದ ಪ್ರತಿಭೆಗಳು ತಮ್ಮ ವೇಷ ಆದ ಮೇಲೆ ಹಿರಿಯ ಕಲಾವಿದರ ಯಕ್ಷಗಾನದ ನಡೆ, ಸಂಪ್ರದಾಯ ನೋಡುವುದಿಲ್ಲ. ಬರಿ ಕುಣಿತ, ಪ್ರಶ್ನೆಯನ್ನು ಕೇಳುವುದೇ ಪ್ರಸಂಗವಾಗಿ ಬಿಟ್ಟಿದೆ. ಯಕ್ಷಗಾನದ ಹಿಂದಿನ ಆ ವೈಭವ ಈಗ ಇಲ್ಲ. ಪ್ರಧಾನ ವೇಷಧಾರಿ ಯಾರು ಎನ್ನುವುದು ಪ್ರಶ್ನೆಯೇ ಹುಟ್ಟಿಕೊಂಡಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷರಂಗದಲ್ಲಿ ಪ್ರೇಕ್ಷಕರಿಗೆ ಎಲ್ಲಾ ತಕ್ಷಣ ಮುಗಿಯಬೇಕು. ಪ್ರಸಂಗ ಬಿಸಿಯಲ್ಲೇ ವೇಗವಾಗಿ ಹೋಗಬೇಕು. ಕುಳಿತು ಪೂರ್ಣ ಪ್ರಸಂಗದ ಬಗ್ಗೆ ತಿಳಿಯಲು ತಾಳ್ಮೆಯಿಲ್ಲ. ಅವರ ನೆಚ್ಚಿನ ಕಲಾವಿದರ ವೇಷ ಆದ ಮೇಲೆ ಆಯಿತು. ಬರೀ ಹಾಸ್ಯ, ಕುಣಿತ, ಸಂಭಾಷಣೆಯ ಬಿಸಿ ಸಾಕು. ದುಃಖ, ಅಭಿನಯ, ಕಥೆಯ ಮುಕ್ತಾಯ ಬೇಡ. ಇದು ಇಂದಿನ ಪ್ರೇಕ್ಷಕರು ಆದರೆ ಕೆಲವರು ಮಾತ್ರ ಯಕ್ಷಗಾನವನ್ನು ಪೂರ್ಣ ಕುಳಿತು ನೋಡುತ್ತಾರೆ.





ಯಕ್ಷಗಾನದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಕಾಲೇಜಿನ ಉಪನ್ಯಾಸದ ಕಡೆಗೆ ಹೆಚ್ಚಿನ ಮಹತ್ವವಿರುವುದರಿಂದ ಸ್ವಲ್ಪ ಯೋಜನೆ ಕಷ್ಟ. ನನಗೆ ತಿಳಿದಿರುವ ವಿಷಯವನ್ನು ವಿದ್ಯಾರ್ಥಿಗಳಿಗೆ ಹೇಳಿ ಯಕ್ಷಗಾನವನ್ನು ಪ್ರತೀ ವರ್ಷ ಮಾಡುತ್ತಾ ಬರುತ್ತಿದ್ದೇನೆ.

ಸನ್ಮಾನ ಹಾಗೂ ಪ್ರಶಸ್ತಿ:-
ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಲಭಿಸಿದೆ. ಯಕ್ಷಗಾನ ಸಂಬಂಧಪಟ್ಟಂತೆ ಯುವಜನ ಯಕ್ಷಗಾನ ಸ್ಪರ್ಧೆಯಲ್ಲಿ ರಾಜ್ಯ ಪ್ರಶಸ್ತಿ ಲಭಿಸಿದೆ. ನಮ್ಮ ಊರಿನಲ್ಲಿ ಕಮಲಶಿಲೆ ಮೇಳದ ರಂಗಸ್ಥಳದಲ್ಲಿ ಸನ್ಮಾನವಾಗಿದೆ. ನೈಲಾಡಿ ಹವ್ಯಾಸಿ ಕಲಾ ರಂಗದಲ್ಲಿ ಹವ್ಯಾಸಿ ಕಲಾವಿದರ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿದೆ. ಉಡುಪಿ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಚರ್ಚಾ ಸ್ಫರ್ಧೆಯಲ್ಲಿ ತೀರ್ಪುಗಾರರ ನೆಚ್ಚಿನ ಪ್ರಶಸ್ತಿ ಬಂದಿರುತ್ತದೆ.

ಹವ್ಯಾಸಗಳು:-
ಕಾಲೇಜಿನ ಬಿಡುವಿನ ಸಂದರ್ಭ ಯಕ್ಷಗಾನ ನೋಡುವುದು, ಶಾಲಾ ಕಾಲೇಜಿನ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೇಕಾದ ಯಕ್ಷಗಾನ ಹೇಳಿಕೊಡುವುದು, ಕೆಲವು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತರಬೇತಿ ನೀಡುವುದು.




ಗುರುಪ್ರಸಾದ್ ಅವರು ವಿನೋದ ಅವರನ್ನು ಮದುವೆಯಾಗಿ ಮಕ್ಕಳಾದ ಧನ್ವಿತಾ.ಜಿ ಮತ್ತು ಪೃಥ್ವಿತಾ.ಜಿ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಗುರುಪ್ರಸಾದ್.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

Comments

Popular posts from this blog

ಯಕ್ಷ ಸಾಧಕರು 355

ಯಕ್ಷ ಸಾಧಕರು 380

ಯಕ್ಷ ಸಾಧಕರು 395