ಯಕ್ಷ ಸಾಧಕರು 353
"ಉತ್ಸಾಹೀ ಕಲಾ ಯಕ್ಷ"
04.05.1986 ರಂದು ದಿ.ಶ್ರೀ ಬಸವ ಕುಲಾಲ ಕಟ್ಕೇರಿ ಮತ್ತು ಶ್ರೀ ಜಲಜ ಕುಲಾಲ್ತಿ ಹಳನೀರು ಇವರ ಮಗನಾಗಿ ಪ್ರವೀಣ ಕುಲಾಲರ ಜನನ. ಓದಿದ್ದು ಡಿಪ್ಲೊಮಾ ಇನ್ ಆಟೋಮೊಬೈಲ್ ಇಂಜಿನಿಯರಿಂಗ್. ಪ್ರಸ್ತುತ "ಪ್ರಕಾಶ್ ಆಟೋ ಸರ್ವಿಸ್" ಕುಂದಾಪುರದಲ್ಲಿ ಕೆಲಸ, LIC ಏಜೆಂಟ್ ಹಾಗೂ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಪ್ರವೀಣ ಕುಲಾಲ. ಪ್ರಸಾದ್ ಕುಮಾರ್ ಮೊಗೆಬೆಟ್ಟು ಯಕ್ಷಗಾನ ಗುರುಗಳು.
ತಂದೆಯವರ ಜೊತೆ ಬಾಲ್ಯದಲ್ಲಿ ಯಕ್ಷಗಾನ ನೋಡುವುದಕ್ಕೆ ಹೋದದ್ದೇ ಈ ಕ್ಷೇತ್ರಕ್ಕೆ ಬರಲು ಪ್ರೇರಣೆ ಹಾಗೂ ಮಾತೃಸಂಘ ಯಕ್ಷಕೇದಿಗೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ಯಡಾಡಿ ಮತ್ಯಾಡಿ ಗುಡ್ಡೆಯಂಗಡಿಯ ಸಹ ಕಲಾವಿದರಾದ ರಾಘವೇಂದ್ರ ಶೆಟ್ಟಿ ಹಳನೀರು ಇವರಿಂದ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಪ್ರವೀಣ ಕುಲಾಲರು ಹೇಳುತ್ತಾರೆ.
ನೆಚ್ಚಿನ ಪ್ರಸಂಗಗಳು:-
ಅಭಿಮನ್ಯು ಕಾಳಗ, ಶ್ರೀ ದೇವಿ ಮಹಾತ್ಮೆ, ರತ್ನಾವತಿ ಕಲ್ಯಾಣ, ಕಂಸವಧೆ, ಸುಧನ್ವ ಕಾಳಗ, ಭೀಷ್ಮ ವಿಜಯ, ಶಶಿಪ್ರಭೆ ಪರಿಣಯ, ವೀರಮಣಿ ಕಾಳಗ.
ನೆಚ್ಚಿನ ವೇಷಗಳು:-
ಕೃಷ್ಣ, ಬಲರಾಮ, ಅಭಿಮನ್ಯು, ಬರ್ಬರಿಕ, ಪ್ರಭಾವತಿ, ಮೀನಾಕ್ಷಿ, ಮಾಲಿನಿ, ವಿದ್ಯುನ್ಮಾಲಿ, ಕಂಸ, ಲವಕುಶ, ಚಂಡ ಮುಂಡ, ಚಂದ್ರಹಾಸ, ಮಹಿಷಾಸುರ.
ಬಲರಾಮ, ಅಂಬಿಕೆ, ವೃದ್ಧ ಬ್ರಾಹ್ಮಣ, ದೂತ, ಧರ್ಮರಾಯ, ರತ್ನಾವತಿ, ಮಾಲಿನಿ, ಸೀತೆ, ಪ್ರಾಸ್ತಿ, ಕಾಳಿ, ಶಿವೆ, ದೇವೇಂದ್ರ ರಂಗದಲ್ಲಿ ನಿರ್ವಹಿಸಿದ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹವ್ಯಾಸಿಯಾದ ನಾನು ಹೆಚ್ಚಾಗಿ ಯಾವುದೇ ಪ್ರಸಂಗದಲ್ಲಿ ಅನುಮಾನಗಳು ಬಂದರೆ ಗುರುಗಳನ್ನೇ ಕೇಳಿ ತಿಳಿಯುತ್ತೇನೆ ಮತ್ತು ತರಬೇತಿಯಲ್ಲಿ ಗುರುಗಳಿಂದ ಕೇಳಿ ಬಗೆಹರಿಸಿಕೊಳ್ಳುತ್ತೇನೆ. ಪ್ರಸಂಗದ ಕಥೆಯ ಕುರಿತು ತಿಳಿಯುತ್ತೇನೆ. ಸಹಕಲಾವಿದರೊಂದಿಗೆ ಸರಿಯಾಗಿ ಅಭಿನಯ, ಪರಸ್ಪರ ಹೊಂದಾಣಿಕೆ. ಕನ್ನಡಕ್ಕೆ ಹೆಚ್ಚಿನ ಮನ್ನಣೆ, ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಸ್ವೀಕರಿಸಿ ಪ್ರಸಂಗ ಒಳ್ಳೇದಾಗುವುದಕ್ಕೆ ಶ್ರಮ. ಯಾವ ಪಾತ್ರವಾದರೂ ಶೃದ್ಧೆಯಿಂದ ನಿರ್ವಹಣೆ. ಪಾತ್ರಪೋಷಣೆ ಮುಖ್ಯ. ಪ್ರಸಾದ್ ಕುಮಾರ್ ಮೊಗೆಬೆಟ್ಟುರವರ ದಕ್ಷ ನಿರ್ದೇಶನ ನನ್ನನ್ನು ಒಳ್ಳೆಯ ಕಲಾವಿದನಾಗಿ ಗುರುತಿಸಲು ಸಾಧ್ಯವಾಯಿತು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಕಲೆ ಎನ್ನುವುದು ಅತೀ ವೇಗವಾಗಿ ಬೆಳೆಯುತ್ತಿದೆ. ಆ ವಿಚಾರವಾಗಿ ಬಹಳ ಸಂತೋಷ. ವೀರ ಚಂದ್ರಹಾಸ ಸಿನಿಮಾದ ಮೂಲಕ ಪ್ರಪಂಚ ಮುಖಕ್ಕೆ ಯಕ್ಷಗಾನದ ಕಂಪು ಪಸರಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ "ಯಕ್ಷಶಿಕ್ಷಣ" ಮೂಲಕ ರಾಮಾಯಣ, ಮಹಾಭಾರತ ಕಥೆಗಳ ಅರಿವು ಮೂಡಿಸುವ ಕಾರ್ಯ ಸೊಗಸಾಗಿದೆ. ಅದು ಅಲ್ಲದೇ ಯಕ್ಷಗಾನ ರಂಗದಲ್ಲಿ ವೃತ್ತಿ ಮೇಳಕ್ಕೆ ಹೇಗೆ ಪ್ರೋತ್ಸಾಹ ಸಿಗುತ್ತಿದೆಯೋ ಅಷ್ಟೇ ಪ್ರೋತ್ಸಾಹ ಹವ್ಯಾಸಿ ರಂಗಕ್ಕೂ ಸಿಗುತ್ತಿದೆ, ಸಂತೋಷದ ವಿಚಾರ.
ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾಲಮಿತಿ ಈಗ ಪ್ರಸ್ತುತ ಆಗಿರುವುದು ಪ್ರೇಕ್ಷಕರು ಕಲಾವಿದರು ಅದಕ್ಕೆ ಹೊಂದಿಕೊಂಡಿದ್ದಾರೆ. ಈಗೀಗ ನೇರಪ್ರಸಾರಕ್ಕೆ ಪ್ರೇಕ್ಷಕರು ಅತಿಯಾಗಿ ಹೊಂದಿಕೊಂಡಿದ್ದಾರೆ. ಇದು ಕಲೆ ಕಲಾವಿದರ ದೃಷ್ಟಿಯಿಂದ ಒಳಿತಲ್ಲ ಎಂದು ನನ್ನ ಭಾವನೆ ಮತ್ತು ಕಲೆ ಕಲಾವಿದರು ಮತ್ತು ಯಕ್ಷಗಾನದ ವಿಚಾರಗಳಲ್ಲಿ ಆರೋಗ್ಯಕರ ವಿಮರ್ಶಗಳೇ ಸದಾ ಇರಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹವ್ಯಾಸಿ ಕಲಾವಿದನಾಗಿ ಮುಂದುವರಿಯುವೆ ಮತ್ತು ನಮ್ಮ ಮಾತೃ ಸಂಘ ಯಕ್ಷ ಕೇದಿಗೆ ಶ್ರೀ ಮಹಾಲಿಂಗೇಶ್ವರ ಯಡಾಡಿ ಮತ್ಯಾಡಿ ಗುಡ್ಡೆಯಂಗಡಿ ಇದರ ಏಳಿಗೆಗೆ ಸದಾ ಶ್ರಮಿಸುತ್ತಾ ಸಂಘದ ಹೆಸರು ಹಾಗೂ ಸಂಘ ಸದಾ ಚಟುವಟಿಕೆ ಇರುವಂತೆ ಶ್ರಮಿಸುತ್ತಾ ಇರಬೇಕು ಮತ್ತು ಕಾರ್ಯರೂಪಕ್ಕೆ ಒಟ್ಟಾಗಿ ತರುತ್ತೇವೆ ಮತ್ತು ಹವ್ಯಾಸಿ ಹಾಗೂ ವೃತ್ತಿ ಮೇಳಗಳನ್ನು ಕಲಾವಿದರನ್ನು ಕಲೆಯನ್ನು ಸದಾ ಮುಕ್ತ ಮನಸ್ಸಿನಿಂದ ಪ್ರೋತ್ಸಾಹ ಮಾಡುವೆ. ಎಲ್ಲಿಯೇ ಹತ್ತಿರ ಯಕ್ಷಗಾನವಿದ್ದರೆ ಯಕ್ಷಗಾನ ಅಭಿಮಾನಿಗಳೊಂದಿಗೆ ಹೋಗಿ ನೋಡುವುದು.
ಯಕ್ಷಗಾನ ನೋಡುವುದು, ರೇಡಿಯೋ ಕೇಳುವುದು ಮತ್ತು ಕೃಷಿ ಚಟುವಟಿಕೆಗಳು ಇವರ ಹವ್ಯಾಸಗಳು.
ಪ್ರವೀಣ ಕುಲಾಲ ಅವರು 20.04.2025 ರಂದು ಹವ್ಯಾಸಿ ಕಲಾವಿದೆ ಕಲಾವತಿ ಅವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪ್ರವೀಣ ಕುಲಾಲರು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment