ಯಕ್ಷ ಸಾಧಕರು 384
"ಉಜ್ವಲ ಪ್ರತಿಭೆ"
ಇವರ ಅಜ್ಜ ಶಂಕರನಾರಾಯಣ ಮಯ್ಯ ಯಕ್ಷಗಾನ ಕಲಾವಿದರು. ಅಮ್ಮನ ಪ್ರೇರಣೆ ಹಾಗೂ ಮನೆಯಲ್ಲಿ ಅಕ್ಕಂದಿರಾದ ನವ್ಯಾ ಹೊಳ್ಳ, ದಿವ್ಯಾ ಹೊಳ್ಳ, ದೀಪ ಹೊಳ್ಳ (ಹವ್ಯಾಸಿ ಯಕ್ಷಗಾನ ಕಲಾವಿದರು) ಅವರ ಪ್ರೇರಣೆ. ಚಿಕ್ಕವರಿದ್ದಾಗ ಹೊಸನಗರ ಮೇಳ ಅಂದ್ರೆ ಈಗಿನ ಹನುಮಗಿರಿ ಮೇಳದವರಿಂದ ಉಜಿರೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಸಪ್ತಾಹದಲ್ಲಿ ದಿವಾಕರ ರೈ ಸಂಪಾಜೆಯವರ ನಾಟ್ಯ ಹಾಗೂ ಚೈತನ್ಯ ಕೃಷ್ಣ ಪದ್ಯಾಣ ಅವರು ಚೆಂಡೆ ಮದ್ದಳೆ ನುಡಿಸುವುದನ್ನು ನೋಡಿ ಪ್ರೇರಣೆಗೊಂಡು ಯಕ್ಷಗಾನ ರಂಗದಲ್ಲಿ ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ತಮ್ಮ ಪ್ರತಿಭೆಯ ಮೂಲಕ ಮಿಂಚುತ್ತಿರುವ ಕಲಾವಿದ ಆದಿತ್ಯ ಹೊಳ್ಳ.
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಸುರೇಶ್ ಹೊಳ್ಳ ಮತ್ತು ವಿಜಯಲಕ್ಷ್ಮಿ ಅವರ ಮಗನಾಗಿ 13.10.2007 ರಂದು ಆದಿತ್ಯ ಹೊಳ್ಳರ ಜನನ.
ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಅನುಗ್ರಹ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉಜಿರೆ, ಉಜಿರೆಯ SDM ನಲ್ಲಿ ಪಿಯು ವಿದ್ಯಾಭ್ಯಾಸ ಪೂರ್ಣಗೊಳಿಸಿ ಪ್ರಸ್ತುತ ಮಂಗಳೂರಿನ St. ಅಲೋಶಿಯಸ್ ಕಾಲೇಜಿನಲ್ಲಿ ಡಿಗ್ರಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.
ಯಕ್ಷಗಾನ ಗುರುಗಳು:-
ಕೊಯ್ಯೂರು ವಿಶ್ವನಾಥ್ ಗೌಡ, ಮೋಹನ ಬೈಪಾಡಿತ್ತಾಯ, ಅರುಣ್ ಕುಮಾರ್ ಧರ್ಮಸ್ಥಳ ಮತ್ತು ನನ್ನ ಅಕ್ಕನವರು ನವ್ಯ, ದಿವ್ಯ ಮತ್ತು ದೀಪಾ.
ನೆಚ್ಚಿನ ಪ್ರಸಂಗಗಳು:-
ಅಭಿಮನ್ಯು ಕಾಳಗ, ರಕ್ತರಾತ್ರಿ, ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ದುಶ್ಯಾಸನ ವಧೆ, ತರಣಿಸೇನ ಕಾಳಗ, ಇಂದ್ರಜಿತು ಕಾಳಗ, ಮಕರಾಕ್ಷ ಕಾಳಗ.
ನೆಚ್ಚಿನ ವೇಷಗಳು:-
ಕೌಂಡ್ಲಿಕ, ರಕ್ತಬೀಜ, ಅಭಿಮನ್ಯು, ಲಕ್ಷ್ಮಣ, ಅರ್ಜುನ, ಮುಂತಾದವುಗಳು.
ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-
ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮುರಾರಿ ಕಡಂಬಳಿತ್ತಾಯ, ದಯಾನಂದ ಶೆಟ್ಟಿಗಾರ್, ಕೃಷ್ಣ ಪ್ರಕಾಶ್ ಉಳಿತ್ತಾಯರು, ಚೈತನ್ಯ ಕೃಷ್ಣ, ಬೊಳಿಂಜಡ್ಕ ಗುರುಪ್ರಸಾದ್, ಕೌಶಿಕ್ ರಾವ್ ಪುತ್ತಿಗೆ,
ನೆಚ್ಚಿನ ಭಾಗವತರು:-
ಪ್ರಸಾದ್ ಬಲಿಪರು, ರವಿಚಂದ್ರ ಕನ್ನಡಿಕಟ್ಟೆ, ಕುಬಣೂರು ಶ್ರೀಧರ್ ರಾವ್, ಪಟ್ಲ ಸತೀಶ್ ಶೆಟ್ಟಿ, ಶ್ರೀನಿವಾಸ ಬಳ್ಳಮಂಜ, ಚಿನ್ಮಯ್ ಭಟ್ ಕಲ್ಲಡ್ಕ, ದೇವರಾಜ್ ಆಚಾರ್ಯ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹಿಮ್ಮೇಳದಲ್ಲಿ ಆದ್ರೆ ಭಾಗವತರಲ್ಲಿ ಪ್ರಸಂಗದ ನಡೆಯನ್ನು ಸ್ವಲ್ಪ ತಿಳಿದುಕೊಂಡು ಹೋಗುವ ಅಭ್ಯಾಸ. ಹಾಗೆ ಹಿಮ್ಮೇಳದಲ್ಲಿಯೇ ನಾನು ಹೆಚ್ಚಾಗಿ ಭಾಗವಹಿಸಿದ್ರಿಂದ ಮುಮ್ಮೇಳದಲ್ಲಿ ನಾನು ರಂಗಕ್ಕೆ ಹೋಗುವ ಮೊದಲು ನನ್ನ ಪಾತ್ರದ ಬಗ್ಗೆ ತಿಳಿದುಕೊಂಡು ಮತ್ತೆ ಸಹ ಕಲಾವಿದರೊಂದಿಗೆ ಚರ್ಚಿಸಿ ಹೋಗುತ್ತೇನೆ ಎಂದು ಹೇಳುತ್ತಾರೆ ಆದಿತ್ಯ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ತುಂಬಾ ಬದಲಾವಣೆಗಳು ಆಗಿವೆ... ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಸಹಜ...
ಯುವ ಮನಸ್ಸುಗಳು ಯಕ್ಷಗಾನದಲ್ಲಿ ಒಲವು ಹೆಚ್ಚುತ್ತಿದೆ. ಅದೊಂದು ಸಂತೋಷದ ವಿಷಯ. ಯಕ್ಷಗಾನ ಕಲೆ ನಮ್ಮ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇವತ್ತಿನ ಪ್ರೇಕ್ಷಕರು ಕಲಾವಿದರನ್ನು ತುಂಬ ಪ್ರೋತ್ಸಾಹಿಸುತ್ತಾರೆ. ಇವತ್ತಿನ ಎಲ್ಲಾ ಯುವ ಪೀಳಿಗೆಯವರು ಸಹ ಯಕ್ಷಗಾನದ ಕಡೆ ಆಸಕ್ತಿ ತೋರಿಸುತ್ತಾ ಇರುವುದು ತುಂಬಾ ಸಂತೋಷದ ಸಂಗತಿ. ಕಲಾವಿದರ ಅಭಿಮಾನಿಗಳಾಗದೆ ಕಲೆಯ ಅಭಿಮಾನಿಗಳಾಗಿ ಉಳಿಯುವ ಪ್ರೇಕ್ಷಕರು ಸಿಗುವುದು ಯಕ್ಷಗಾನಕ್ಕೆ ಒಳ್ಳೆಯದು.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
ಯಕ್ಷಗಾನವನ್ನು ಉಳಿಸಬೇಕಾದದ್ದು ಇಲ್ಲ, ಅದು ಉಳಿಯುತ್ತದೆ, ಮುಂದೆ ಬೆಳೆಯುತ್ತದೆ. ಆದರೆ ಕಲಾವಿದರಾದ ನಾವು ಅದರ ನಿಯಮಗಳ ಪ್ರಕಾರವಾಗಿ
ಕಲಿತು ಶಿಸ್ತಿನಲ್ಲಿ ಮಾಡಿ ಅಳತೆ ಮೀರದೆ ನಡೆಸಬೇಕು. ಇದು ಕಲಾವಿದನ ಕರ್ತವ್ಯ. ಇದುವೇ ಕಲಾವಿದ ಯಕ್ಷಗಾನಕ್ಕೆ ಕೊಡುವ ಕೊಡುಗೆ ಅಂದರು ತಪ್ಪಲ್ಲ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಮುಂದಿನ ಯೋಚನೆ ಅಂತ ಏನೂ ಇಲ್ಲ. ಆದ್ರೆ ನನ್ನ ಕೆರಿಯರ್ ಜೊತೆಗೆ ಈ ಪ್ಯಾಶನ್ ಅನ್ನು ಮುಂದುವರೆಸುತ್ತೇನೆ.
2023 ರಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ಅಡ್ಯಾರ್ ಗಾರ್ಡನ್ ಅಲ್ಲಿ ನಡೆಸಿರುವ ಯಕ್ಷಗಾನ ಸ್ಪರ್ಧೆಯಲ್ಲಿ ಕಿರೀಟ ವೇಷದಲ್ಲಿ ಪ್ರಥಮ ಸ್ಥಾನ.
ಮುಂಬೈ ಅಲ್ಲಿ ಅಜೆಕಾರ್ ಕಲಾಭಿಮಾನಿಗಳ ಬಳಗದಿಂದ ನಡೆದ ಯಕ್ಷಗಾನದಲ್ಲೂ ಸನ್ಮಾನಿಸಲಾಗಿತ್ತು.
ತಬಲಾ, ಚೆಂಡೆ, ಮದ್ದಳೆ ಬಾರಿಸುವುದು ಹಾಗೂ ನಾಟ್ಯ ಇವರ ಹವ್ಯಾಸಗಳು.
ಕಟೀಲು ಮೇಳ, ಪಾವಂಜೆ ಮೇಳ, ಮಂಗಳಾದೇವಿ ಮೇಳ, ಬಪ್ಪನಾಡು ಮೇಳ, ಗೆಜ್ಜೆಗಿರಿ ಮೇಳ, ಬದಲಿಗೆ ಹೋಗಿ ಸೇವೆಯನ್ನು ಮಾಡಿರುತ್ತಾರೆ ಆದಿತ್ಯ.
ತಂದೆ, ತಾಯಿ ಕುಟುಂಬದವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಆದಿತ್ಯ ಹೊಳ್ಳ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
Comments
Post a Comment